• ಎಸ್ಪಿ ಕೆ. ರಾಮರಾಜನ್ ರಿಂದ ಖಡಕ್ ಕ್ರಮ
• 18 ಮಂದಿ ರೌಡಿಶೀಟರ್ಗಳು ಈಗ ಗಡಿಪಾರು
• ಕ್ರಿಮಿನಲ್ಗಳ ಹವಾಕ್ಕೆ ಬ್ರೇಕ್ ಹಾಕಿದ ಖಾಕಿ
• ಜಿಲ್ಲೆಯಾದ್ಯಂತ ಶಾಂತಿ ಕಾಪಾಡಲು ಪೊಲೀಸ್ ಕಟ್ಟೆಚ್ಚರ

ಬೆಳಗಾವಿ ಜಿಲ್ಲೆಯಲ್ಲಿ ಪುಂಡಾಟಿಕೆ ನಡೆಸುತ್ತಿದ್ದ ರೌಡಿಶೀಟರ್ಗಳ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಕಾನೂನಿನ ಚಾಟಿ ಬೀಸಿದ್ದಾರೆ. ಸಾರ್ವಜನಿಕರಲ್ಲಿ ಭಯ ಹುಟ್ಟಿಸುತ್ತಿದ್ದ ಸುಮಾರು 18 ಮಂದಿ ಕ್ರಿಮಿನಲ್ಗಳನ್ನು ಜಿಲ್ಲೆಯಿಂದಲೇ ಹೊರಹಾಕುವ ಮೂಲಕ ಗಡಿಪಾರು ಆದೇಶ ಹೊರಡಿಸಿ ಸಂಚಲನ ಮೂಡಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸಕ್ರಿಯರಾಗಿದ್ದ 18 ಮಂದಿ ಆರೋಪಿಗಳನ್ನು ಗಡಿಪಾರು ಮಾಡಿ ಜಿಲ್ಲಾ ಎಸ್ಪಿ ಕೆ. ರಾಮರಾಜನ್ ಅವರು ಅದೇಶಿಸಿದ್ದಾರೆ. ಗೋಕಾಕ, ನಿಪ್ಪಾಣಿ, ಸವದತ್ತಿ, ರಾಮದುರ್ಗ, ಯಮಕನಮರಡಿ, ಹುಕ್ಕೇರಿ, ಕಿತ್ತೂರು ಮತ್ತು ಸಂಕೇಶ್ವರ ಸೇರಿದಂತೆ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಈ ಆರೋಪಿಗಳು ನಿರಂತರವಾಗಿ ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡಿ ಹವಾ ಸೃಷ್ಟಿಸುತ್ತಿದ್ದವರು, ಗಾಂಜಾ ಮಾರಾಟ, ಮಟ್ಕಾ ದಂಧೆ ಹಾಗೂ ಸಾರ್ವಜನಿಕರಿಗೆ ಬೆದರಿಕೆ ಹಾಕುತ್ತಿದ್ದ ಕ್ರಿಮಿನಲ್ಗಳಿಗೆ ಈಗ ಕಾನೂನಿನ ಬಿಸಿ ಮುಟ್ಟಿಸಲಾಗಿದೆ. ಅಪರಾಧದ ಹಿನ್ನೆಲೆ ಆಧರಿಸಿ ಈ 18 ಮಂದಿಗೆ 3 ತಿಂಗಳು, 6 ತಿಂಗಳು, 8 ತಿಂಗಳು ಹಾಗೂ 1 ವರ್ಷಗಳ ಕಾಲ ಬೆಳಗಾವಿ ಜಿಲ್ಲೆಯಿಂದ ಗಡಿಪಾರು ಮಾಡಿ ಶಿಕ್ಷೆ ವಿಧಿಸಲಾಗಿದ್ದು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಈ ಕಠಿಣ ಕ್ರಮ ಕೈಗೊಂಡಿದೆ.
