ಮದುವೆ ಸಂಭ್ರಮದ ಹೆಸರಲ್ಲಿ ಸಾರ್ವಜನಿಕ ಶಾಂತಿಗೆ ಭಂಗ ತರುತ್ತೀರಾ? ಹಾಗಿದ್ದರೆ ಹುಷಾರ್! ಬೆಳಗಾವಿ ತಾಲೂಕಿನ ಸುಳೇಬಾವಿಯಲ್ಲಿ ಮಧ್ಯರಾತ್ರಿ ವಿಪರೀತ ಶಬ್ದ ಮಾಡುತ್ತಿದ್ದ ಸೌಂಡ್ ಸಿಸ್ಟಮ್ ಮೇಲೆ ಪೊಲೀಸರು ದಾಳಿ ಮಾಡಿದ್ದು, ಮೂವರನ್ನು ಕಾನೂನು ಬಲೆಗೆ ಕೆಡವಿದ್ದಾರೆ.

: ಬೆಳಗಾವಿ ತಾಲೂಕಿನ ಸುಳೇಬಾವಿ ಗ್ರಾಮದ ಹೊಸಕೇರಿ ಗಲ್ಲಿಯಲ್ಲಿ ಮದುವೆ ಕಾರ್ಯಕ್ರಮದ ನಿಮಿತ್ತ ಯಾವುದೇ ಅನುಮತಿ ಪಡೆಯದೆ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದವರ ವಿರುದ್ಧ ಮಾರಿಹಾಳ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಸಾರ್ವಜನಿಕ ಸ್ಥಳದಲ್ಲಿ ರಸ್ತೆ ಅಡೆತಡೆ ಮಾಡಿ, ಅಸುರಕ್ಷಿತವಾಗಿ ವಿಪರೀತ ಶಬ್ದದ ಡಾಲ್ಬಿ ಸೌಂಡ್ ಹಚ್ಚಿ ಜನಜೀವನಕ್ಕೆ ಅಪಾಯ ತಂದೊಡ್ಡಿದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ. ಪ್ರಕರಣದಲ್ಲಿ ಸುಳೇಬಾವಿಯ ಸುರೇಶ ರಾಮಪ್ಪ ಬಂಗನ್ನವರ, ಸೋಮನಟ್ಟಿಯ ವೀರಭದ್ರ ನಾಗಪ್ಪ ಯರಗುದ್ದಿ ಹಾಗೂ ವಾಡೇಗಲ್ಲ ಸುಳೇಬಾವಿಯ ರೋಹಿತ್ ದೇವಪ್ಪ ಲಕ್ಕನಗೌಡರ
ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ಬಳಸಿದ್ದ RA ಕಂಪನಿಯ ಸೌಂಡ್ ಬೇಸ್ ಮತ್ತು ಟಾಪ್, RITZ ಕಂಪನಿಯ ಮಿಕ್ಚರ್, ಹೋಂಡಾ ಜನರೇಟರ್ ಹಾಗೂ KA-22/T-3566 ಸಂಖ್ಯೆಯ ಟ್ರ್ಯಾಕ್ಟರ್ ಟ್ರಾಲಿಯನ್ನು ಜಪ್ತಿ ಮಾಡಲಾಗಿದೆ. ಹೆಚ್ಸಿ ಎ.ಎಮ್. ಶೀಲವಂತರ ಅವರು ನೀಡಿದ ದೂರಿನ ಮೇರೆಗೆ ಕರ್ನಾಟಕ ಪೊಲೀಸ್ ಕಾಯ್ದೆ ಹಾಗೂ ಐಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ
