ಬೆಳಗಾವಿ ಜಿಲ್ಲೆಯ ಬಾಳೆಕುಂದ್ರಿಯಲ್ಲಿ ಆಪತ್ತಿನಲ್ಲಿದ್ದ ಎರಡು ರಾಷ್ಟ್ರಪಕ್ಷಿ ನವಿಲುಗಳನ್ನು ‘ಬೆಳಗಾವಿ ಡೈರೀಸ್’ ರಕ್ಷಣಾ ತಂಡವು ಯಶಸ್ವಿಯಾಗಿ ರಕ್ಷಿಸಿದೆ. ಸಾರ್ವಜನಿಕರ ಸಮಯೋಚಿತ ಮಾಹಿತಿಯಿಂದಾಗಿ ಈ ಸುಂದರ ಪಕ್ಷಿಗಳು ಈಗ ಸುರಕ್ಷಿತವಾಗಿದ್ದು, ಅಗತ್ಯ ಚಿಕಿತ್ಸೆ ಪಡೆಯುತ್ತಿವೆ.


ಬೆಳಗಾವಿ ತಾಲೂಕಿನ ಬಾಳೆಕುಂದ್ರಿ ಗ್ರಾಮದ ಮನೆಯೊಂದರ ಆವರಣದಲ್ಲಿ ಸಿಲುಕಿಕೊಂಡಿದ್ದ ಎರಡು ನವಿಲುಗಳನ್ನು ಶನಿವಾರ ಯಶಸ್ವಿಯಾಗಿ ರಕ್ಷಿಸಲಾಗಿದೆ. ಮನೆಯ ಮಾಲೀಕರು ನೀಡಿದ ತುರ್ತು ಮಾಹಿತಿಯ ಮೇರೆಗೆ ‘ಬೆಳಗಾವಿ ಡೈರೀಸ್’ ಸಾಮಾಜಿಕ ಕಾರ್ಯಕರ್ತರ ತಂಡ ಸ್ಥಳಕ್ಕೆ ಧಾವಿಸಿತು.
ಅವಧೂತ್ ತುಡವೇಕರ್, ಗಜಾನನ ಗವ್ಹಾನೆ, ಪದ್ಮಪ್ರಸಾದ್ ಹೂಲಿ, ವಿಕ್ಕಿ ಮೆಹ್ತಾ, ಗೌತಮ್ ಶ್ರಾಫ್, ಶಶಿಕಾಂತ್ ಅಂಬೇವಾಡ್ಕರ್, ನಿಲೇಶ್ ಹಿರೇಹೊಳ್ಳಿ ಮತ್ತು ಮೈಕೆಲ್ ಪಿಂಟೊ ಅವರನ್ನೊಳಗೊಂಡ ತಂಡವು ಅತ್ಯಂತ ಜಾಗರೂಕತೆಯಿಂದ ಪಕ್ಷಿಗಳನ್ನು ಸೆರೆಹಿಡಿಯಿತು.
ನಂತರ ಇವುಗಳನ್ನು ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ಪಶು ವೈದ್ಯಕೀಯ ಆಸ್ಪತ್ರೆಗೆ ಕೊಂಡೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ಪ್ರಸ್ತುತ ನವಿಲುಗಳ ಆರೋಗ್ಯ ಸ್ಥಿರವಾಗಿದ್ದು, ಮುಂದಿನ ಆರೈಕೆಗಾಗಿ ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ತಂಡದ ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
