ಕಾಂಗ್ರೆಸ್ ಮುಸ್ಲಿಂ ತುಷ್ಟೀಕರಣ ಮಾಡುತ್ತಿದೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಅಥಣಿ ಶಾಸಕ ಲಕ್ಷ್ಮಣ ಸವದಿ ತಿರುಗೇಟು ನೀಡಿದರು. ಬಿಜೆಪಿಗೆ ಕೆಲಸವಿಲ್ಲ, ಅಶೋಕ್ಗೆ ನೆನಪಿನ ಶಕ್ತಿಯಿಲ್ಲ ಎಂದಿದ್ದಾರೆ.

ಅಥಣಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಮಾಡುವುದಕ್ಕೆ ಬೇರೆ ಯಾವುದೇ ಕೆಲಸ ಇಲ್ಲ. ಆರೋಪ ಮಾಡುವುದು ಬಿಟ್ಟರೆ ಮತ್ತೇನೂ ಮಾಡುವುದಿಲ್ಲ. ಹಿಂದುತ್ವದ ಮಾತು ಮಾತ್ರ ಆಡುತ್ತಾರೆ,” ಎಂದು ಕಿಡಿಕಾರಿದರು.
ಸಂವಿಧಾನದಲ್ಲಿ ಎಲ್ಲರೂ ಸಮಾನರು. ಎಲ್ಲ ವರ್ಗಗಳನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವುದು ಸರ್ಕಾರದ ಕರ್ತವ್ಯ. ಆದರೆ ಬಿಜೆಪಿ ಯಾಕೆ ಮುಸ್ಲಿಂ ಸಮುದಾಯವನ್ನು ವಿರೋಧಿಸುತ್ತದೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷ ಎಲ್ಲರನ್ನು ಒಳಗೊಂಡು ಸಾಗುವ ಪಕ್ಷ ಎಂದು ಅವರು ಹೇಳಿದರು.
ಸಿದ್ದರಾಮಯ್ಯ ಚೀಲದ ರಾಮಯ್ಯ’ ಎಂಬ ಹೇಳಿಕೆ ನೀಡಿದ್ದ ಆರ್. ಅಶೋಕ್ ವಿರುದ್ಧವೂ ಅವರು ವಾಗ್ದಾಳಿ ನಡೆಸಿದರು. “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ಕಿ ಯೋಜನೆ ಬಗ್ಗೆ ತಾವು ಕೊಟ್ಟೆ ಎಂದು ಹೇಳಿಲ್ಲ. ಕೇಂದ್ರದಿಂದ 5 ಕಿಲೋ ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರವೂ 5 ಕಿಲೋ ಅಕ್ಕಿ ನೀಡುತ್ತಿದೆ ಎಂದು ಹೇಳಿದ್ದಾರೆ,” ಎಂದು ಸ್ಪಷ್ಟಪಡಿಸಿದರು. ಆರ್. ಅಶೋಕ್ ಅವರಿಗೆ ನೆನಪಿನ ಶಕ್ತಿ ಕಡಿಮೆ ಆಗುತ್ತಿದೆ. ಅದರಿಂದಲೇ ಏನೇನೋ ಮಾತನಾಡುತ್ತಾರೆ,” ಎಂದು ತಿರುಗೇಟು ನೀಡಿದರು.
