ಗ್ರಾಹಕರ ಠೇವಣಿ ಮರಳಿಸುವಂತೆ ನೀಡಿದ್ದ ಆದೇಶ ಪಾಲಿಸದ ಬೆಳಗಾವಿಯ ರಿದ್ದಿಸಿದ್ಧಿ ವಿವಿಧೋದ್ದೇಶ ಕೋ-ಆಪ್ ಸೊಸೈಟಿ ಅಧ್ಯಕ್ಷ ಶ್ಯಾಮ ಜಾಧವಗೆ 1 ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತೀರ್ಪು ಪ್ರಕಟಿಸಿದೆ ಎಂದು ನ್ಯಾಯವಾದಿ ಎನ್.ಆರ್.ಲಾತೂರ್ ತಿಳಿಸಿದರು.
ಶುಕ್ರವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಠೇವಣಿ ಅವಧಿ ಮುಗಿದರೂ ಹಣ ಮರಳಿಸುತ್ತಿಲ್ಲ ಎಂದು ಸೊಸೈಟಿ ಗ್ರಾಹಕರಾದ ಸ್ನೇಹಾ ನಾದ ಮತ್ತು ಅವರ ಪುತ್ರಿ ಪರಿಮಳಾ 2023ರಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಕುರಿತು ಗ್ರಾಹಕರ ಪರವಾಗಿ ತೀರ್ಪು ಪ್ರಕಟಿಸಿದ್ದ ಜಿಲ್ಲಾ ಆಯೋಗ, 4 ಲಕ್ಷ ರೂ. ಠೇವಣಿಯನ್ನು ಬಡ್ಡಿ ಸಹಿತ ಪಾವತಿಸುವಂತೆ ಆದೇಶ ನೀಡಿತ್ತು ಎಂದರು.
ಆದೇಶ ಪಾಲಿಸದ ಹಿನ್ನೆಲೆಯಲ್ಲಿ 2026ರಲ್ಲಿ 25 ಸಾವಿರ ರೂ. ದಂಡಸಹಿತ 1 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಈ ತೀರ್ಪಿನ ವಿರುದ್ಧ ಶ್ಯಾಮ ಜಾಧವ, ರಾಜ್ಯ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ರಾಜ್ಯ ಆಯೋಗ ಕೂಡ ಫೆ.4ರಂದು ಅರ್ಜಿ ವಜಾಗೊಳಿಸಿ, ಜಿಲ್ಲಾ ಆಯೋಗದ ತೀರ್ಪು ಎತ್ತಿ ಹಿಡಿದಿತ್ತು. ಈಗ ಜಿಲ್ಲಾ ಆಯೋಗ ಮಾ.25ರಂದು ಶ್ಯಾಮ ಜಾಧವಗೆ ಜೈಲು ವಾರಂಟ್ ಹೊರಡಿಸಿದ್ದು, ಆ ಪ್ರಕಾರ ಸೊಸೈಟಿ ಅಧ್ಯಕ್ಷ ಜೈಲು ಪಾಲಾಗಿದ್ದಾರೆ ಎಂದರು.
