ಪ್ರತಿ ಬಾರಿ ಕೂಡಾ ಮಳೆಗಾಲ ಬಂತೆಂದರೆ ಸಾಕು ದೋಣಿ ನದಿ ತೀರದ ಜನರ ಸಮಸ್ಯೆ ಹೇಳತೀರದು. ದೋಣಿ ನದಿಯಿಂದ ಅಪಾರ ಪ್ರಮಾಣದ ನೀರು ರೈತರ ಜಮೀನಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತದೆ. ರೈತರ ದಶಕದ ಬೇಡಿಕೆ ಇಡೇರಿತು ಎನ್ನುವಷ್ಟರಲ್ಲ ಈಗ ಕಳಪೆ ಕಾಮಗಾರಿಯ ಆರೋಪ ಕೇಳಿ ಬಂದಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ…

ವಿಜಯಪುರ ಜಿಲ್ಲೆಯಲ್ಲಿ ಡೋಣಿ ನದಿಯಲ್ಲಿನ ಹೂಳಿನಿಂದಾಗಿ ಪ್ರವಾಹ ಪ್ರತಿ ವರ್ಷ ಉಂಟಾಗುತ್ತದೆ ಅನ್ನೋ ಕಾರಣಕ್ಕೆ ರೈತರು ನದಿಯಲ್ಲಿನ ಹೂಳೆತ್ತಲು ದಶಕಗಳಿಂದಲೇ ಬೇಡಿಕೆಯಿಟ್ಟಿದ್ದರು. ಈ ವಿಚಾರವಾಗಿ ರೈತರು ಹೋರಾಟ ಮಾಡುತ್ತಲೇ ಬಂದಿದ್ದಾರೆ. ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಿಂದ ವಿಜಯಪುರ ಜಿಲ್ಲಾಧಿಕಾರಿ ಕಚೇರಿ ವರೆಗೆ ಸಹಿತ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಕೊನೆಗೂ ರೈತರ ದಶಕಗಳ ಬೇಡಿಕೆಗೆ ಮಣಿದು ಸರ್ಕಾರ, ಜಿಲ್ಲಾಡಳಿತ ಡೋಣಿ ನದಿಯಲ್ಲಿನ ಹೂಳೆತ್ತುವ ಕಾಮಗಾರಿ ಕೊನೆಗೆ ಆರಂಭಿಸಿದೆ. ಆದರೆ ಈ ಕಾಮಗಾರಿ ಸಮರ್ಪಕವಾಗಿ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ…
ವಿಜಯಪುರ ಜಿಲ್ಲೆಯ ಸಾರವಾಡ ಗ್ರಾಮ ಸೇರಿದಂತೆ ಹೊನಗನಹಳ್ಳಿ ಬಳಿಯ ಡೋಣಿ ನದಿಯಲ್ಲಿ ಹೂಳೆತ್ತುವ ಕಾಮಗಾರಿ ನಡೆದಿದೆ. 10 ಕೋಟಿ ಅನುದಾನದಲ್ಲಿ ಡೋಣಿ ನದಿಯಲ್ಲಿ ಹೂಳೆತ್ತಲಾಗುತ್ತಿದೆ. 350 ಫೂಟ್ ಅಗಲ, 10 ಫೂಟ್ ಆಳ ಅಗೆಯಬೇಕಿತ್ತು. ಆದ್ರೆ 300 ಫೂಟ್ ಅಗಲ, ಐದಾರು ಫೂಟ್ ಆಳ ಮಾತ್ರ ಹೂಳೆತ್ತಿ ಗುತ್ತಿಗೆದಾರ ಕೈತೊಳೆದುಕೊಳ್ತಿದ್ದಾರೆ. ಡೋಣಿ ನದಿಯಲ್ಲಿ ನಾಮಕಾವಸ್ಥೆ ಹೂಳೆತ್ತಿ ಹಣ ಎತ್ತುವಳಿ ಮಾಡ್ತಿರೋ ಆರೋಪ ಕೇಳಿ ಬಂದಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಡೋಣಿ ನದಿಯಲ್ಲಿ ಪ್ರವಾಹ ಉಂಟಾಗಿ ಅಕ್ಕಪಕ್ಕದ ಜಮೀನಿನಲ್ಲಿ ನೀರು ನುಗ್ಗಿ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿ ರೈತರಿಗೆ ಹಾನಿ ಆಗ್ತಿದೆ. ಹೀಗಾಗಿ ಡೋಣಿ ನದಿ ಪಾತ್ರದಲ್ಲಿ ಸಂಪೂರ್ಣವಾಗಿ ಹೂಳೆತ್ತಿ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳುವ ಬದಲಿಗೆ ನಾಮಕಾವಸ್ಥೆ ಎಂಬಂತೆ ಹೂಳೆತ್ತುವುದು ಸರಿಯಲ್ಲ ಎಂದು ರೈತ ಮುಖಂಡರು ಆರೋಪಿಸಿದ್ದಾರೆ…
ಒಟ್ಟಾರೆ, ರೈತರ ಬೇಡಿಕೆ ಕೊನೆಗೂ ಇಡೇರುತ್ತಿದೆ ಎಂಬದರ ಮದ್ಯೆ ಕಳಪೆ ಕಾಮಗಾರಿಯ ಆರೋಪ ಕೇಳಿ ಬಂದಿದೆ. ಸಂಬಂಧ ಪಟ್ಟ ಅಧಿಕಾರಿಗಳು, ಜನ ಪ್ರತಿನಿಧಿಗಳು ಈ ಕುರಿತು ಲಕ್ಷ ವಹಿಸಿ ಗುಣಮಟ್ಟದ ಕಾಮಗಾರಿ ಮಾಡಲು ಸೂಚನೆ ನೀಡಬೇಕಿದೆ, ಇರದೇ ಹೋದರೆ ಮತ್ತೆ ಮಳೆಗಾಲದ ಸಂದರ್ಭದಲ್ಲಿ ಮತ್ತೆ ರೈತರ ದೋಣಿ ನದಿ ಪಾತ್ರದ ಜನರ ಸಮಸ್ಯೆ ತಪ್ಪಿದ್ದಲ್ಲ…
