ಕುಂದಾನಗರಿ ಬೆಳಗಾವಿಯಲ್ಲಿ ಮಂಗಳವಾರ ಸಂಜೆ ಸುರಿದ ಆಲಿಕಲ್ಲು ಸಹಿತ ಬಿರುಗಾಳಿ ಮಳೆ ಭಾರಿ ಅವಾಂತರ ಸೃಷ್ಟಿಸಿದೆ. ವಿಶೇಷವಾಗಿ ನಗರದ ವೀರಭದ್ರ ನಗರ ಮತ್ತು ಖುಸ್ರೋ ನಗರದಲ್ಲಿ ಮಳೆಯ ಆರ್ಭಟಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ರಂಜಾನ್ ಹಬ್ಬದ ನಿಮಿತ್ತ ತಾತ್ಕಾಲಿಕವಾಗಿ ಹಾಕಲಾಗಿದ್ದ ಇಪ್ಪತ್ತಕ್ಕೂ ಹೆಚ್ಚು ಗೂಡಂಗಡಿಗಳು ಬಿರುಗಾಳಿಯ ರಭಸಕ್ಕೆ ನೆಲಕ್ಕುರುಳಿವೆ. ಬಲವಾದ ಗಾಳಿಗೆ ಅಂಗಡಿಗಳ ಮೇಲ್ಛಾವಣಿಗಳು ಹಾರಿಹೋಗಿದ್ದು, ವ್ಯಾಪಾರಕ್ಕಾಗಿ ಸಂಗ್ರಹಿಸಿಟ್ಟಿದ್ದ ಆಹಾರ ಸಾಮಗ್ರಿಗಳು ಹಾಗೂ ಇತರ ವಸ್ತುಗಳು ಮಳೆ ನೀರಿನಲ್ಲಿ ನೆನೆದು ಹಾನಿಯಾಗಿವೆ.

ಸಂಜೆ ಸುಮಾರು 7 ಗಂಟೆ ಸುಮಾರಿಗೆ ವ್ಯಾಪಾರಸ್ಥರು ಹಬ್ಬದ ನಿಮಿತ್ತ ಗ್ರಾಹಕರಿಗಾಗಿ ಆಹಾರ ಪದಾರ್ಥಗಳನ್ನು ಸಿದ್ಧಪಡಿಸುತ್ತಿದ್ದಾಗಲೇ ಏಕಾಏಕಿ ವರುಣನ ಆರ್ಭಟ ಶುರುವಾಗಿದೆ. ಬಿರುಗಾಳಿ ಸಹಿತ ಸುರಿದ ಮಳೆಯಿಂದಾಗಿ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ದಿಕ್ಕುತೋಚದಂತಾಗಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಇಡೀ ರಸ್ತೆಗಳು ಕೆರೆಯಂತಾಗಿದ್ದು, ಚರಂಡಿ ನೀರು ಅಂಗಡಿಗಳ ಒಳಗೆ ನುಗ್ಗಿದ್ದರಿಂದ ವ್ಯಾಪಾರಸ್ಥರು ದೊಡ್ಡ ಮಟ್ಟದ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ವರ್ಷವಿಡೀ ಕಾಯುತ್ತಿದ್ದ ಹಬ್ಬದ ಸೀಸನ್ನಲ್ಲಿ ಇಂತಹ ಅವಘಡ ಸಂಭವಿಸಿರುವುದು ಬಡ ವ್ಯಾಪಾರಿಗಳ ಕಣ್ಣೀರಿಗೆ ಕಾರಣವಾಗಿದೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಸಂಕಷ್ಟದಲ್ಲಿದ್ದ ವ್ಯಾಪಾರಿಗಳಿಗೆ ನೆರವು ನೀಡಿದರು. ಬಿರುಗಾಳಿಗೆ ಉರುಳಿಬಿದ್ದಿದ್ದ ಅಂಗಡಿಗಳನ್ನು ಸರಿಪಡಿಸಲು ಮತ್ತು ಮಳೆ ನೀರಿನಲ್ಲಿ ಸಿಲುಕಿದ್ದ ವಸ್ತುಗಳನ್ನು ರಕ್ಷಿಸಲು ಶ್ರಮಿಸಿದರು. ಅದೃಷ್ಟವಶಾತ್ ಈ ಭೀಕರ ಗಾಳಿ-ಮಳೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ಹಬ್ಬದ ಸಂಭ್ರಮದ ನಡುವೆಯೇ ವರುಣ ನೀಡಿದ ಈ ಆಘಾತದಿಂದಾಗಿ ವೀರಭದ್ರ ನಗರದ ವ್ಯಾಪಾರಸ್ಥರು ಕಂಗಾಲಾಗಿದ್ದು, ಹಾನಿಗೊಳಗಾದವರಿಗೆ ಸೂಕ್ತ ಪರಿಹಾರ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ. ಕಣಬರ್ಗಿಯಲ್ಲಿ ಭಾರಿ ಮಳೆಗೆ ಜನಜೀವನ ಅಸ್ತವಸ್ತ ಗೊಂಡಿದೆ. ಮನೆಗಳಿಗೆ ನೀರು ನುಗ್ಗಿದೆ. ಅಲ್ಲದೇ, ಬಸ್ ಶೇಲ್ಟರ್ ಅಂಗಡಿಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಫ್ಲೋ
