ಬೆಳಗಾವಿಯ ಗಡಿ ಹೋರಾಟ ಹಾಗೂ ಮರಾಠಿ ಶಾಲೆಗಳ ಅಸ್ತಿತ್ವದ ಕಿಚ್ಚು ಇನ್ನು ಮುಂದೆ ಚಿತ್ರಮಂದಿರಗಳಲ್ಲಿ ಮೊಳಗಲಿದೆ. ಮಹಾರಾಷ್ಟ್ರ ಏಕೀಕರಣ ಯುವ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಖ್ಯಾತ ಮರಾಠಿ ಚಲನಚಿತ್ರ ನಿರ್ದೇಶಕ ಹೇಮಂತ್ ಢೋಮೆ ಅವರು, ಬೆಳಗಾವಿಯ ಗಡಿ ಪ್ರಶ್ನೆಯನ್ನೇ ಆಧಾರವಾಗಿಟ್ಟುಕೊಂಡು ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ. ಮಾತೃಭಾಷೆಯ ಶಿಕ್ಷಣದ ಮಹತ್ವ ಸಾರುವ ಈ ವಿಶೇಷ ವರದಿ ನಿಮ್ಮ ಮುಂದೆ…


ಬೆಳಗಾವಿಯ ಮರಾಠಾ ಮಂದಿರದಲ್ಲಿ ನಡೆದ ‘ಮರಾಠಿ ಭಾಷಾ ಗೌರವ ದಿನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಖ್ಯಾತ ನಿರ್ದೇಶಕ ಹೇಮಂತ್ ಢೋಮೆ, ಗಡಿಭಾಗದ ಮರಾಠಿ ಶಾಲೆಗಳ ಉಳಿವು ಮತ್ತು ಭಾಷಾ ಸಂವರ್ಧನೆಯ ಬಗ್ಗೆ ತಮ್ಮ ವಿಚಾರಗಳನ್ನು ಹಂಚಿಕೊಂಡರು.

ಮಾತೃಭಾಷೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಇಂದು ವಿಶ್ವದಾದ್ಯಂತ ಉನ್ನತ ಹುದ್ದೆಗಳಲ್ಲಿದ್ದಾರೆ ಎಂದು ನೆನಪಿಸಿದ ಅವರು, ಇಂಗ್ಲಿಷ್ ವ್ಯಾಮೋಹದಿಂದಾಗಿ ಕನ್ನಡ ಮತ್ತು ಮರಾಠಿಯಂತಹ ಸ್ಥಳೀಯ ಭಾಷಾ ಶಾಲೆಗಳು ಸಂಖ್ಯೆಯಲ್ಲಿ ಕ್ಷೀಣಿಸುತ್ತಿರುವುದು ಕಳವಳಕಾರಿ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಬೆಳಗಾವಿಯ ಗಡಿ ಹೋರಾಟವು ಪ್ರಜಾಪ್ರಭುತ್ವದ ಹಾದಿಯಲ್ಲಿ ನಡೆಯುತ್ತಿರುವ ಸುದೀರ್ಘ ಹೋರಾಟವಾಗಿದೆ.

ಈ ಹೋರಾಟ ಮತ್ತು ಇಲ್ಲಿನ ವಿಶಿಷ್ಟ ಭಾಷಾ ಸೊಗಡನ್ನು ಒಳಗೊಂಡ ಸಿನಿಮಾವನ್ನು ತಯಾರಿಸಿ ಇಡೀ ಮಹಾರಾಷ್ಟ್ರದಾದ್ಯಂತ ಬಿಡುಗಡೆ ಮಾಡುವ ಸಂಕಲ್ಪ ಮಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಮನೋಹರ್ ಕಿಣೇಕರ್, ಮಾಜಿ ಮೇಯರ್ ಮಾಲೋಜಿ ಅಷ್ಟೇಕರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಬೆಳಗಾವಿ ಹಾಗೂ ಖಾನಾಪುರ ತಾಲೂಕಿನ ಆದರ್ಶ ಶಾಲೆಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

