ಪರೀಕ್ಷೆಗಳು ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ತೋರಿಸಲು ಇರುವ ಅಪೂರ್ವ ಅವಕಾಶವಾಗಿವೆ. ಇಂತಹ ಸುವರ್ಣ ಅವಕಾಶವನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಸಾಧನೆ ಮಾಡಬೇಕು ಎಂದು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.


ಪಟ್ಟಣದ ಪರಟಿ ನಾಗಲಿಂಗೇಶ್ವರ ಕಲ್ಯಾಣಮಂಟಪದಲ್ಲಿ ಚಿಕ್ಕೋಡಿ ಶೈಕ್ಷಣಿಕಜಿಲ್ಲಾ ಮಟ್ಟದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿ, ಮಕ್ಕಳು ದೇಶದ ದೊಡ್ಡ ಆಸ್ತಿಯಾಗಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ಓದಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ಅಂಕ ಗಳಿಕೆಗಾಗಿಯೇ ಓದುವುದು ಮುಖ್ಯವಲ್ಲದಿದ್ದರೂ ಸತತ ಅಧ್ಯಯನದಿಂದ ಸಮಾಜದಲ್ಲಿ ಉನ್ನತ ಸ್ಥಾನ ತಲುಪಲು ಸಾಧ್ಯವಿದೆ. ತಂದೆ-ತಾಯಿ, ಶಿಕ್ಷಕರು ಕಂಡ ಕನಸನ್ನು ನನಸು ಮಾಡುವ ಮೂಲಕ ಸಮಾಜ ಕ್ಕೆ ವಿದ್ಯಾರ್ಥಿಗಳು ವಿಶಿಷ್ಟವಾದ ಕೊಡುಗೆ ನೀಡುವ ತುಡಿತ ಹೊಂದಿದವರಾಗಿರಬೇಕು ಎಂದರು.

ಚಿಕ್ಕೋಡಿ ಡಿಡಿಪಿಐ ಆರ್. ಎಸ್. ಸೀತಾರಾಮು ಮಾತನಾಡಿ, ಪರೀಕ್ಷೆ ಎನ್ನುವುದು ಹಬ್ಬವಿದ್ದಂತೆ. ವಿದ್ಯಾರ್ಥಿಗಳು ಪರೀಕ್ಷೆಯನ್ನು ಸಂಭ್ರಮದಿಂದ ಬರೆಯಬೇಕು. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಬಗೆಯನ್ನು ಕಾರ್ಯಾಗಾರ ಹಮ್ಮಿಕೊಳ್ಳುವ ಮೂಲಕ ವಿನೂತನ ಹೆಜ್ಜೆ ಇಟ್ಟಿದ್ದು ಶ್ಲಾಘನೀಯವಾಗಿದೆ ಎಂದರು.
ಕಾರ್ಯಾಗಾರದಲ್ಲಿ ”ಪರೀಕ್ಷಾ ಭಯ ಹೋಗಲಾಡಿಸುವುದು ಮತ್ತು ಒತ್ತಡ ನಿರ್ವಹಣೆ” ಕುರಿತು ಬೈಲವಾಡದ ಪ್ರಕಾಶ ಮಾಸ್ತಿಹೊಳಿ, ಪರೀಕ್ಷಾ ಸಿದ್ದತೆ, ಪರಿಣಾಮಕಾರಿ ಅಧ್ಯಯನ” ವಿಷಯ ಕುರಿತು ಶಿರಗಾಂವದ ಸುನೀಲ ಕಾಜಗಾರ, ”ಮಾನಸಿಕ ಆರೋಗ್ಯ, ಸಮಯದ ಹೊಂದಾಣಿಕೆ’ ಕುರಿತು ಬೆಲ್ಲದ ಬಾಗೇವಾಡಿಯ ಸುನೀಲ ಹಲಕರ್ಣಿ, “ಗಣಿತ ವಿಷಯದ ಪ್ರಮುಖ ಅಂಶಗಳು” ಅರ್ಜುನವಾಡದ ಸುನೀಲ ಕುರಿತು ಖೋತ 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು. ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಚಿಕ್ಕೋಡಿ ಬಿಇಒ ಪ್ರಭಾವತಿ ಪಾಟೀಲ, ಜಿಲ್ಲಾ ನೋಡಲ್ ಅಧಿಕಾರಿ ಎಚ್.ಎಸ್. ಖಾಡೆ, ನಿಪ್ಪಾಣಿ ಬಿಇಒ ಮಹಾದೇವಿ ನಾಯ್ಕ, ರಾಯಬಾಗ ಬಿಇಒ ಬಸವರಾಜಪ್ಪ ಆರ್. ಅಥಣಿ ಬಿಇಒ ಮಲ್ಲಪ್ಪ ಮುಂಜಿ, ಕಾಗವಾಡ ಬಿಇಒ ಪಾಂಡುರಂಗ ಮದಭಾವಿ ಇದ್ದರು.
