ಮರು ಸಮೀಕ್ಷೆಯಿಂದ ಮಾಜಿ ದೇವದಾಸಿ ಹಾಗೂ ಅವರ ಮಕ್ಕಳಿಗಾಗಿ ವಿಶೇಷ ಪ್ಯಾಕೇಜ್ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬಜೆಟ್ ಅಧಿವೇಶನದಲ್ಲಿ ಸೋಮವಾರ ವಿಧಾನ ಪರಿಷತ್ ಕಲಾಪದ ವೇಳೆ ದೇವದಾಸಿ ಸಮೀಕ್ಷೆಗೆ ಸಂಬಂಧಿಸಿದಂತೆ ಗಮನ ಸೆಳೆದಾಗ ಉತ್ತರಿಸಿದ ಸಚಿವರು, ಮಾಜಿ ದೇವದಾಸಿ ಮಹಿಳೆಯರಿಗಾಗಿ ಹೆಚ್ಚಿನ ಪಿಂಚಣಿ, ವಸತಿ, ಆರೋಗ್ಯ ಹಾಗು ಆದಾಯೋತ್ಪನ್ನಕರ ಚಟುವಟಿಕೆ ಹಾಗೂ ಸಾಲಸೌಲಭ್ಯ ಒದಗಿಸಲಾಗುತ್ತದೆ ಎಂದರು.
45 ವರ್ಷ ಮೇಲ್ಪಟ್ಟ ಮಾಜಿ ದೇವದಾಸಿ ಮಹಿಳೆಯರಿಗೆ ಪಿಂಚಣಿಯನ್ನು ನೀಡಲಾಗುತ್ತಿದೆ. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ 2013-14 ರಿಂದ ಈವರೆಗೆ ಒಟ್ಟು 13,663 ಮಾಜಿ ದೇವದಾಸಿ ಮಹಿಳೆಯರಿಗೆ 30,000 ರೂಪಾಯಿಗಳಿಂದ 50,000 ರೂಪಾಯಿಗಳ ವರೆಗೆ ಪ್ರೋತ್ಸಾಹ ಧನವನ್ನು ನೀಡಲಾಗಿದೆ ಎಂದರು.
ಮಾಜಿ ದೇವದಾಸಿ ಮಹಿಳೆಯರಿಗಾಗಿ ಹೆಚ್ಚಿನ ಪಿಂಚಣಿ, ವಸತಿ, ಆರೋಗ್ಯ ಹಾಗು ಆದಾಯೋತ್ಪನ್ನಕರ ಚಟುವಟಿಕೆ ಹಾಗೂ ಸಾಲಸೌಲಭ್ಯ ಒದಗಿಸಲಾಗುತ್ತದೆ. ರಾಜೀವ್ ಗಾಂಧಿ ವಸತಿ ನಿಗಮದಿಂದ 10,725 ಮಂದಿ ವಸತಿ ಸೌಲಭ್ಯವನ್ನು ಪಡೆದಿರುತ್ತಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾಹಿತಿ ನೀಡಿದರು.
ರಾಜ್ಯದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ವತಿಯಿಂದ 1993-94 ಹಾಗೂ 2007-08 ರಲ್ಲಿ ಮಾಜಿ ದೇವದಾಸಿ ಮಹಿಳೆಯರ (14 ಜಿಲ್ಲೆಗಳು) ಸಮೀಕ್ಷೆಯನ್ನು ನಡೆಸಿದ್ದು ಒಟ್ಟು 46,660 ಮಾಜಿ ದೇವದಾಸಿ ಮಹಿಳೆಯರನ್ನು ಗುರುತಿಸಲಾಗಿದೆ. 2024-25ನೇ ಸಾಲಿನ ಆಯವ್ಯಯ ಘೋಷಣೆಯಂತೆ ರಾಜ್ಯದ 15 ಜಿಲ್ಲೆಗಳಲ್ಲಿ ಸಮೀಕ್ಷೆಯನ್ನು ನಡೆಸಿದ್ದು, ಸಮೀಕ್ಷೆಯಲ್ಲಿ 23,395 ಮಾಜಿ ದೇವದಾಸಿ ಮಹಿಳೆಯರು E-Governence ಇಲಾಖೆಯ EDCS web application ಮೂಲಕ ಸೆಪ್ಟಂಬರ್ 15, 2025 ರಿಂದ ಡಿಸೆಂಬರ್ 31, 2025 ರವರೆಗೆ (03 ತಿಂಗಳು) ರಾಜ್ಯದಲ್ಲಿ ವ್ಯಾಪಕ ಪ್ರಚಾರವನ್ನು ನೀಡಿ ಸಮೀಕ್ಷೆಯನ್ನು ಪೂರ್ಣಗೊಳಿಸಲಾಯಿತು ಎಂದು ಹೇಳಿದರು.
ಮರು ಸಮೀಕ್ಷೆಯನ್ನು ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಹಮ್ಮಿಕೊಳ್ಳಲಾಯಿತು. ಮರುಸಮೀಕ್ಷೆಯಲ್ಲಿ ಮಾಜಿ ದೇವದಾಸಿ ಮಹಿಳೆಯರ 1ನೇ, 2ನೇ ಹಾಗೂ 3ನೇ ತಲೆಮಾರಿನ ಒಟ್ಟು 90,092 ಮಾಜಿ ದೇವದಾಸಿಯರ ಮಕ್ಕಳು ಇರುವುದಾಗಿ ತಿಳಿದು ಬಂದಿರುತ್ತದೆ. ಅವರಿಗೆ ಶಿಕ್ಷಣ, ಕೌಶಲ್ಯ ತರಬೇತಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಹಾಗು ಆದಾಯೋತ್ಪನ್ನಕರ ತರಬೇತಿ ಹಾಗು ಸಾಲ ಸೌಲಭ್ಯ ನೀಡುವ ಬಗ್ಗೆ ಕ್ರಿಯಾ ಯೋಜನೆಯನ್ನು ತಯಾರಿಸಿ ಸಮಾಜ ಕಲ್ಯಾಣ ಇಲಾಖೆಯವರಿಗೆ ಸಲ್ಲಿಸಲಾಗಿದೆ ಎಂದು ಸಚಿವರು ಉತ್ತರಿಸಿದರು.
