ಸಕ್ಕರೆ ಕಾರ್ಖಾನೆಗಳ ಗುಣಮಟ್ಟವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸುವ ಮತ್ತು NABL ಮಾನ್ಯತೆ ಪಡೆಯುವ ಉದ್ದೇಶದಿಂದ, ಬೆಳಗಾವಿಯ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ರಾಜ್ಯ ಮಟ್ಟದ ಕಾರ್ಯಾಗಾರ ನಡೆಯಿತು. ಸಕ್ಕರೆ ಆಯುಕ್ತರ ಕಚೇರಿ ಹಾಗೂ ಸಂಸ್ಥೆಯ ಸಹಯೋಗದಲ್ಲಿ ನಡೆದ ಈ ಕಾರ್ಯಾಗಾರವು ಕಾರ್ಖಾನೆಗಳ ಸಿಬ್ಬಂದಿಗೆ ಹೊಸ ತಾಂತ್ರಿಕ ದಿಕ್ಸೂಚಿಯಾಯಿತು.

ಮಾನ್ಯ ಸಕ್ಕರೆ ಆಯುಕ್ತರು ಹಾಗೂ ಕಬ್ಬು ಅಭಿವೃದ್ಧಿ ನಿರ್ದೇಶಕರಾದ ಗೋವಿಂದರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಾಗಾರದಲ್ಲಿ, ಸಕ್ಕರೆ ಕಾರ್ಖಾನೆಗಳ ಪ್ರಯೋಗಾಲಯಗಳನ್ನು NABL ಮಾನ್ಯತೆಗನುಗುಣವಾಗಿ ಅಭಿವೃದ್ಧಿಪಡಿಸುವ ಬಗ್ಗೆ ಸವಿಸ್ತಾರವಾಗಿ ಚರ್ಚಿಸಲಾಯಿತು. NABL ಮಾನ್ಯತೆ ಪಡೆಯುವುದರಿಂದ ಸಕ್ಕರೆಯ ಗುಣಮಟ್ಟ ಹೆಚ್ಚುವುದಲ್ಲದೆ, ಹೊರರಾಜ್ಯ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಲಿದೆ ಎಂದು ತಾಂತ್ರಿಕ ತಜ್ಞರು ಪ್ರತಿಪಾದಿಸಿದರು. ರೈತರು ಮತ್ತು ಕಾರ್ಖಾನೆ ಮಾಲೀಕರ ನಡುವಿನ ಬಾಂಧವ್ಯವನ್ನು ಬಲಪಡಿಸಲು ಪಾರದರ್ಶಕ ಪ್ರಯೋಗಾಲಯಗಳ ಅವಶ್ಯಕತೆ ಇದೆ ಎಂದು ಸಭೆಯಲ್ಲಿ ಒತ್ತು ನೀಡಲಾಯಿತು.
ಕಾರ್ಯಕ್ರಮದ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ,

ಸಕ್ಕರೆ ಕಾರ್ಖಾನೆಗಳ ದೈನಂದಿನ ವರದಿಯನ್ನು ಆನ್ಲೈನ್ ಮೂಲಕ ದಾಖಲಿಸುವ ‘ಡಾಟಾ ಎಂಟ್ರಿ ಸಾಫ್ಟ್ವೇರ್’ ಕುರಿತ ತರಬೇತಿ. Deavnet Solutions ಸಂಸ್ಥೆಯು ಆನ್ಲೈನ್ ಅರ್ಜಿ ಸಲ್ಲಿಕೆ ಮತ್ತು ಡೇಟಾ ನಿರ್ವಹಣೆಯ ಸರಳ ವಿಧಾನಗಳನ್ನು ಸಿಬ್ಬಂದಿಗಳಿಗೆ ಪ್ರಾಯೋಗಿಕವಾಗಿ ವಿವರಿಸಿತು. ಈ ಹೊಸ ಡಿಜಿಟಲ್ ವ್ಯವಸ್ಥೆಯಿಂದ ದತ್ತಾಂಶ ನಿರ್ವಹಣೆ ಸುಲಭವಾಗಲಿದ್ದು, ಕಾರ್ಖಾನೆ ಹಾಗೂ ರೈತರ ನಡುವಿನ ನ್ಯೂನತೆಗಳನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ ಎಂದು ಅಯುಕ್ತರು ತಿಳಿಸಿದರು. ಸಂಸ್ಥೆಯ ಉಪನ್ಯಾಸಕ ವೃಷಭ ಅಸ್ತಿ ಮತ್ತು ತಾಂತ್ರಿಕ ಸಲಹೆಗಾರರು ಸಮಾರೋಪ ನುಡಿಗಳನ್ನಾಡಿದರು.
