ಸರ್ವರ ಆಶಯದಂತೆ ಜಾತಿ, ಭಾಷೆ, ಧರ್ಮ, ಭೇದಭಾವ ತೊರೆದು ಬಸವಣ್ಣವರ ಕಾಯಕ ತತ್ವದಡಿಯಲ್ಲಿ ಬೆಳಗಾವಿಯ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುವೆ. ಮೊದಲ ಬಾರಿ ಪಾಲಿಕೆ ಸದಸ್ಯೆಯಾಗಿ ಆಯ್ಕೆಯಾಗುವದರ ಜೊತೆಗೆ ಮೊದಲ ಪ್ರಯತ್ನದಲ್ಲಿ ಅತ್ಯಂತ ಜವಾಬ್ದಾರಿಯುತ ಮಹಾಪೌರ ಹುದ್ದೆ ನೀಡಿದ್ದು ಜವಾಬ್ದಾರಿಗೆ ತಕ್ಕಂತೆ ಸರ್ವರ ಸಹಾಯ,ಸಹಕಾರ ಮತ್ತು ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುವೆ ಎಂದು ನೂತನವಾಗಿ ಮಹಾಪೌರರಾಗಿ ಆಯ್ಕೆಯಾದ ಪ್ರೀತಿ ಕಾಮಕರ ತಿಳಿಸಿದರು.
ರವಿವಾರ ದಿ.22 ರಂದು ಬೆಳಗಾವಿಯ ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಉಪಮಹಾಪೌರರಾಗಿ ಆಯ್ಕೆಯಾದ ಹನುಮಂತ ಕೊಂಗಾಲಿ ಸನ್ಮಾನ ಸ್ವೀಕರಿಸಿ ಮಾತನಾಡಿ ಕೊಟ್ಟಿರುವ ಜವಾಬ್ದಾರಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವ ಮೂಲಕ ಬೆಳಗಾವಿ ನಗರದ ಅಭಿವೃದ್ಧಿಗೆ ಶ್ರಮಿಸುವೆ ಎಂದರು. ಅಧ್ಯಕ್ಷತೆ ವಹಿಸಿದ್ದ ಲಿಂಗಾಯತ ಸಂಘಟನೆ ಅಧ್ಯಕ್ಷ ಈರಣ್ಣ ದೇಯನ್ನವರ ಮಾತನಾಡಿ ಬೆಳಗಾವಿ ಇತಿಹಾಸದಲ್ಲಿ ಮೊದಲ ಬಾರಿ ಇಬ್ಬರು ಕನ್ನಡಿಗರು ಪ್ರಥಮ ಪ್ರಜೆಗಳಾಗಿ ಆಯ್ಕೆಯಾದದ್ದು ಹರ್ಷ ತಂದಿದೆ.
ಸಮಗ್ರ ಸಮುದಾಯದಗಳ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ಶಶಿಭೂಷಣ ಪಾಟೀಲ, ಬಿ. ಪಿ. ಜೇವಣಿ, ಶಿವಾನಂದ ನಾಯಕ, ಶಿವಾನಂದ ತಲ್ಲೂರ, ಎಂ ವೈ ಮೆಣಸಿನಕಾಯಿ, ಶ್ರೀದೇವಿ ನರಗುಂದ ಮಹಾದೇವಿ ಅರಳಿ,ವಿಜಯ ಹುದಲಿಮಠ, ಬಸವರಾಜ ಬಿಜ್ಜರಗಿ, ಆನಂದ ಕರ್ಕಿ, ಸುನಿಲ ಸಾಣಿಕೊಪ್ಪ ಶಂಕ್ರಪ್ಪ ಮೆಣಸಿಗಿ ಲಕ್ಷ್ಮಿಕಾಂತ ಗುರವ ಸುಶೀಲಾ ಗುರವ್ ಸೇರಿದಂತೆ ಸಂಘಟನೆಯ ಸದಸ್ಯರು ಮತ್ತು ಶರಣರು ಉಪಸ್ಥಿತರಿದ್ದರು ಕಾರ್ಯಕ್ರಮದ ಆರಂಭದಲ್ಲಿ ಮಹಾದೇವಿ ಅರಳಿ ಸ್ವಾಗತಿಸಿದರು ಸತೀಶ ಪಾಟೀಲ ಪರಿಚಯಿಸಿದರು ಸಂಗಮೇಶ ಅರಳಿ ನಿರೂಪಿಸಿದರು ಸುರೇಶ ನರಗುಂದ ವಂದಿಸಿದರು.
