1. ದರೋಡೆ ಪ್ರಕರಣ: ಕಾಗವಾಡ ಪೊಲೀಸರಿಂದ ಆರೋಪಿ ಬಂಧನ
2. ಕೇವಲ ನಾಲ್ಕು ಗಂಟೆಯಲ್ಲಿ ಭೇದಿಸಿದ ದರೋಡೆ ಪ್ರಕರಣ
3. ಮಾರಕಾಸ್ತ್ರ ತೋರಿಸಿ ಹಣ ದೋಚಿದ ಖದೀಮ ಅರೆಸ್ಟ್
4. ಪೊಲೀಸರ ಮಿಂಚಿನ ಕಾರ್ಯಾಚರಣೆಗೆ ಸಾರ್ವಜನಿಕರ ಭಾರೀ ಮೆಚ್ಚುಗೆ

ಕಾಗವಾಡ ತಾಲೂಕಿನಲ್ಲಿ ನಡೆದ ದರೋಡೆ ಪ್ರಕರಣವನ್ನು ಕೇವಲ ನಾಲ್ಕೇ ಗಂಟೆಯಲ್ಲಿ ಭೇದಿಸುವ ಮೂಲಕ ಪೊಲೀಸರು ಖಾಕಿ ಖದರ್ ತೋರಿಸಿದ್ದಾರೆ. ಮಾರಕಾಸ್ತ್ರ ತೋರಿಸಿ ಲಕ್ಷಾಂತರ ರೂಪಾಯಿ ದೋಚಿದ್ದ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಶಿರಗುಪ್ಪಿ ಗ್ರಾಮದ ಹೊರವಲಯದಲ್ಲಿ ಬೈಕ್ ಮೇಲೆ ತೆರಳುತ್ತಿದ್ದ ಉಗಾರ ಬಿ.ಕೆ. ಗ್ರಾಮದ ನಿವಾಸಿ ಶಾಂತು ಅವಳೆಕರ ಎಂಬಾತನಿಗೆ ಮಾರಕಾಸ್ತ್ರ ತೋರಿಸಿ ದರೋಡೆ ಮಾಡಿದ್ದ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕಾಗವಾಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಸಾಗರ ಸನದಿ ಎಂಬಾತ, ಬೈಕ್ ಸವಾರನಿಗೆ ಮಾರಕಾಸ್ತ್ರದ ಬೆದರಿಕೆ ಹಾಕಿ ಆತನ ಬಳಿ ಇದ್ದ ಸುಮಾರು 2 ಲಕ್ಷ 81 ಸಾವಿರದ 280 ರೂಪಾಯಿ ನಗದನ್ನು ದೋಚಿಕೊಂಡು ಪರಾರಿಯಾಗಿದ್ದನು. ಘಟನೆ ನಡೆದ ಕೂಡಲೇ ಎಚ್ಚೆತ್ತುಕೊಂಡ ಕಾಗವಾಡ ಪೊಲೀಸರು, ಅತ್ಯಂತ ಚುರುಕಾಗಿ ಕಾರ್ಯಾಚರಣೆ ನಡೆಸಿ ಕೇವಲ 4 ಗಂಟೆಯ ಅವಧಿಯಲ್ಲಿ ಆರೋಪಿ ಸಾಗರ ಸನದಿಯನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಈ ಕ್ಷಿಪ್ರ ಕಾರ್ಯಾಚರಣೆಯನ್ನು ಸ್ಥಳೀಯ ಸಾರ್ವಜನಿಕರು ಮತ್ತು ನಾಗರಿಕರು ಅಭಿನಂದಿಸಿದ್ದಾರೆ. ಕಾನೂನು ಸುವ್ಯವಸ್ಥೆ ಪಾಲನೆಯಲ್ಲಿ ಕಾಗವಾಡ ಪೊಲೀಸರು ತೋರಿದ ಈ ದಕ್ಷತೆ ಈಗ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.
