ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಪುಟ್ಟ ಬಾಲಕಿಯೊಬ್ಬಳ ಜಾಗರೂಕತೆ ಇತಿಹಾಸವನ್ನೇ ಹೊರಹಾಕಿದೆ. ದೇವಸ್ಥಾನವೊಂದರಲ್ಲಿ ದೈವದ ರೂಪ ಎಂದು ನಂಬಲಾಗಿದ್ದ ಕಲ್ಲು, ವಾಸ್ತವದಲ್ಲಿ ವೀರರಾಣಿ ಬೆಳವಡಿ ಮಲ್ಲಮ್ಮನ ಶೌರ್ಯವನ್ನು ಸಾರುವ ಶಿಲಾಶಾಸನ ಎಂದು ಗುರುತಿಸಲಾಗಿದೆ. ಈ ಕುರಿತಾದ ವಿಶೇಷ ವರದಿ ಇಲ್ಲಿದೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಹನುಮಂತನ ದೇವಸ್ಥಾನದಲ್ಲಿ ಈ ಐತಿಹಾಸಿಕ ಮಹತ್ವದ ಶಿಲಾಶಾಸನ ಪತ್ತೆಯಾಗಿದೆ. 11 ವರ್ಷದ ಲಕ್ಷ್ಮೀ ಹುಂಬಿ ಎಂಬ ಬಾಲಕಿ ತನ್ನ ತಂದೆಯೊಂದಿಗೆ ದೇವಸ್ಥಾನಕ್ಕೆ ತೆರಳಿದ್ದಾಗ, ಅಲ್ಲಿನ ಕಲ್ಲಿನ ಮೇಲಿನ ಕೆತ್ತನೆಗಳನ್ನು ಗಮನಿಸಿದ್ದಾಳೆ. ಈ ಕಲ್ಲಿನಲ್ಲಿ ವೀರರಾಣಿ ಬೆಳವಡಿ ಮಲ್ಲಮ್ಮನ ವೀರಗಾಥೆಯ ದೃಶ್ಯಗಳು ಕೆತ್ತಲ್ಪಟ್ಟಿರುವುದನ್ನು ಆಕೆ ತಕ್ಷಣವೇ ಗುರುತಿಸಿ ತನ್ನ ತಂದೆಗೆ ತೋರಿಸಿದ್ದಾಳೆ.
ಈ ಶಿಲಾಶಾಸನವು ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯವು ಬೆಳವಡಿ ಮಲ್ಲಮ್ಮನ ಗೋವುಗಳನ್ನು ಅಪಹರಿಸಿದಾಗ, ಆಕೆ ಅವುಗಳನ್ನು ಮರಳಿ ತರಲು ನಡೆಸಿದ ಹೋರಾಟವನ್ನು ಸುಂದರವಾಗಿ ಕೆತ್ತಲಾಗಿದೆ. ಅಚ್ಚರಿಯ ವಿಷಯವೆಂದರೆ, ಈ ಐತಿಹಾಸಿಕ ಮಹತ್ವದ ಶಿಲಾಶಾಸನವನ್ನು ಇಷ್ಟು ದಿನಗಳ ಕಾಲ ಗ್ರಾಮಸ್ಥರು ಶನಿದೇವರು ಎಂದು ನಂಬಿ ಪೂಜಿಸುತ್ತಿದ್ದರು. ಬಾಲಕಿಯೊಬ್ಬಳ ಸೂಕ್ಷ್ಮ ಅವಲೋಕನದಿಂದ ಈಗ ಇತಿಹಾಸದ ಹೊಸ ಪುಟ ತೆರೆದುಕೊಂಡಂತಾಗಿದೆ.
ಪುಟ್ಟ ಬಾಲಕಿಯ ಈ ಐತಿಹಾಸಿಕ ಜ್ಞಾನ ಮತ್ತು ಗುರುತಿಸುವಿಕೆಯನ್ನು ಗ್ರಾಮಸ್ಥರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇತಿಹಾಸವನ್ನು ಸಂರಕ್ಷಿಸುವಲ್ಲಿ ಮಹತ್ವದ ಹೆಜ್ಜೆ ಇಟ್ಟ ಲಕ್ಷ್ಮೀ ಹುಂಬಿಯನ್ನು ಗ್ರಾಮದ ಜನರು ಸನ್ಮಾನಿಸಿ, ಗೌರವಿಸಿದ್ದಾರೆ. ಮರೆತುಹೋಗಿದ್ದ ನಮ್ಮ ಇತಿಹಾಸದ ಕೊಂಡಿಯೊಂದನ್ನು ಬಾಲಕಿ ಪತ್ತೆ ಹಚ್ಚಿದ್ದು, ಈಗ ಇಡೀ ಗ್ರಾಮದಲ್ಲಿ ಹೆಮ್ಮೆಯ ವಿಷಯವಾಗಿದೆ.
