ಬೆಳಗಾವಿ: ನಗರದ ಪೆಟ್ರೋಲ್ ಬಂಕ್ಗಳ ಮುಂದೆ ಸೃಷ್ಟಿಯಾಗಿರುವ ಅನಗತ್ಯ ಆತಂಕವನ್ನು ದೂರ ಮಾಡಲು ಪೊಲೀಸ್ ಇಲಾಖೆ ಈಗ ಅಖಾಡಕ್ಕಿಳಿದಿದೆ. ಇಂಧನ ಮಾರಾಟಗಾರರೊಂದಿಗೆ ತುರ್ತು ಸಭೆ ನಡೆಸಿರುವ ಪೊಲೀಸರು, ಸಾರ್ವಜನಿಕರ ಸುರಕ್ಷತೆ ಮತ್ತು ಶಾಂತಿ ಕಾಪಾಡಲು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.
ನಗರದ ಪೆಟ್ರೋಲ್ ಬಂಕ್ಗಳ ಮುಂದೆ ಇಂಧನಕ್ಕಾಗಿ ಜನರು ಮುಗಿಬೀಳುತ್ತಿರುವುದನ್ನು ಗಮನಿಸಿದ ಬೆಳಗಾವಿ ಪೊಲೀಸರು ಇಂದು ಪೆಟ್ರೋಲ್ ಬಂಕ್ ಮಾಲೀಕರೊಂದಿಗೆ ಮಹತ್ವದ ಸಭೆ ನಡೆಸಿದರು. ಪೆಟ್ರೋಲ್ ಮತ್ತು ಡೀಸೆಲ್ ದಾಸ್ತಾನು ಸಮರ್ಪಕವಾಗಿದ್ದು, ಸಾರ್ವಜನಿಕರು ಆತಂಕದಿಂದ ಇಂಧನ ಸಂಗ್ರಹಿಸುವ ಅಗತ್ಯವಿಲ್ಲ ಎಂದು ಪ್ರತಿಯೊಂದು ಬಂಕ್ಗಳಲ್ಲಿ ಮಾಹಿತಿ ಫಲಕ ಹಾಕಲು ಸೂಚಿಸಲಾಗಿದೆ. ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಬಾಟಲಿ ಅಥವಾ ಕ್ಯಾನ್ಗಳಲ್ಲಿ ಪೆಟ್ರೋಲ್ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದ್ದು, ಬಂಕ್ಗಳ ಬಳಿ ಗಲಾಟೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು 112 ಸಹಾಯವಾಣಿಗೆ ಕರೆ ಮಾಡಲು ತಿಳಿಸಲಾಗಿದೆ. ನಗರದಾದ್ಯಂತ ಹೊಯ್ಸಳ ಮತ್ತು ಪೊಲೀಸ್ ವಾಹನಗಳು 24 ಗಂಟೆಗಳ ಕಾಲ ಗಸ್ತಿನಲ್ಲಿರಲಿದ್ದು, ಇಂಧನ ಕೇಂದ್ರಗಳಿಗೆ ಸಂಪೂರ್ಣ ರಕ್ಷಣೆ ನೀಡಲಿವೆ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.
