ಬೆಳಗಾವಿಯ ನ್ಯೂ ಗಾಂಧಿ ನಗರದಲ್ಲಿಂದು ಮಕ್ಕಳ ಕಳ್ಳರ ಭೀತಿ ಜನರನ್ನು ರೊಚ್ಚಿಗೇಳಿಸಿದೆ. ಮಗುವನ್ನು ಅಪಹರಿಸಲು ಯತ್ನಿಸಿದ ಆರೋಪದ ಮೇಲೆ ಬುರ್ಖಾಧಾರಿ ಮಹಿಳೆಯೊಬ್ಬಳನ್ನು ಹಿಡಿದು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ತಳ್ಳಾಟ-ನೂಕಾಟ ನಡೆದು ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.

ಅನುಮಾನಾಸ್ಪದವಾಗಿ ಬುರ್ಖಾ ಧರಿಸಿ ಬಂದಿದ್ದ ಮಹಿಳೆಯೊಬ್ಬಳು ಹಾಡು ಹಗಲೇ ಮಗುವನ್ನು ಅಪಹರಸಿಕೊಂಡು ಹೋಗುತ್ತಿದ್ದಾಳೆಂದು ಆರೋಪಿಸಿ ಸ್ಥಳೀಯರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಬೆಳಗಾವಿ ನ್ಯೂ ಗಾಂಧಿ ನಗರದಲ್ಲಿ ನಡೆದಿದೆ.
ಬೆಳಗಾವಿಯ ನ್ಯೂಗಾಂಧಿ ನಗರದಲ್ಲಿ ಬುರ್ಖಾ ಧರಿಸಿ ಬಂದ ಮಹಿಳೆಯೊಬ್ಬಳು ಅನುಮಾನಾಸ್ಪದವಾಗಿ ಓಡಾಡಿದ್ದಾಳೆ. ಅಲ್ಲದೇ ಮಗುವನ್ನು ಹಿಡಿದು ಚೀಲಕ್ಕೆ ಹಾಕುತ್ತಿದ್ದಳೆಂದು ಆರೋಪಿಸಿ ಸ್ಥಳೀಯರು ಆಕೆಗೆ ಧರ್ಮದೇಟು ನೀಡಿ ಪೊಲೀಸ್ ಚೌಕಿಯಲ್ಲಿ ತಂದು ಒಪ್ಪಿಸಿದ್ದಾರೆ.
ಮಕ್ಕಳ ಕಳ್ಳಿ ಎಂದು ಆರೋಪಿಸಿದ ಜನರು ಆಕ್ರೋಶಗೊಂಡು ಚೌಕಿ ಬಳಿ ದೌಡಾಯಿಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೊಲೀಸರು ಅನುಮಾನಾಸ್ಪದ ವ್ಯಕ್ತಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಅದನ್ನು ಬಿಟ್ಟು ಹಿಡಿದು ಕೊಟ್ಟವರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ನಮಗೆ ನಮ್ಮ ಮಕ್ಕಳಿಗೆ ಸುರಕ್ಷತೆ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ನಗರಸೇವಕ ಆಝೀಮ್ ಪಟ್ವೇಗಾರ ಅವರು ಅನುಮಾನಾಸ್ಪದವಾಗಿ ಬಂದ ಮಹಿಳೆ ಮಗುವನ್ನು ಎಳೆದುಕೊಂಡು ಹೋಗುವಾಗ ಜನರು ಗಮನಿಸಿದ್ದಾರೆ. ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದರು. ಸ್ಥಳಕ್ಕೆ ಮಾಳ ಮಾರುತಿ ಪೊಲೀಸ್ ಠಾಣೆಯ ಸಿಪಿಐ ಬಿ.ಆರ್. ಗಡ್ಢೇಕರ ಅವರು ಆಗಮಿಸಿ ಆಕೆಯನ್ನು ವಶಕ್ಕೆ ಪಡೆಯುವಾಗ ಸ್ಥಳೀಯರು ಮತ್ತು ಪೊಲೀಸರ ನಡುವ ತಳ್ಳಾಟ ನೂಕಾಟ ನಡೆದಿದೆ. ಈ ವೇಳೆ ಲಾಠಿ ಬೀಸಿದ್ದರಿಂದ ಓರ್ವ ವ್ಯಕ್ತಿ ಗಾಯಗೊಂಡಿದ್ದಾನೆ.
ಈ ವೇಳೆ ಮಾತನಾಡಿದ ಮಾಳ ಮಾರುತಿ ಪೊಲೀಸ್ ಠಾಣೆಯ ಸಿಪಿಐ ಬಿ.ಆರ್. ಗಡ್ಢೇಕರ ಸೋಷಿಯಲ್ ಮೀಡಿಯಾದಲ್ಲಿ ಕೆಲ ಸಂದೇಶಗಳು ವೈರಲ್ ಆಗಿವೆ. ಈಗಾಗಲೇ ಹಲವೆಡೆ ಇಂತಹ ಘಟನೆಗಳು ನಡೆದಿವೆ. ಸೋಷಿಯಲ್ ಮೀಡಿಯಾದಲ್ಲಿರುವ ಸಂದೇಶಗಳು ನಿಜವಾಗಿರುವುದಿಲ್ಲ. ಅನುಮಾನಾಸ್ಪದ ಮಹಿಳೆಯನ್ನು ಈಗಾಗಲೇ ವಶಕ್ಕೆ ಪಡೆದಿದ್ದು, ತನಿಖೆ ನಡೆಸಿದ ಬಳಿಕ ಸತ್ಯಾ ಸತ್ಯತೆ ಹೊರ ಬರಲಿದೆ ಎಂದರು.
ಈಗಾಗಲೇ ಪೊಲೀಸರು ಅನುಮಾನಾಸ್ಪದ ಮಹಿಳೆಯನ್ನು ವಶಕ್ಕೆ ಪಡೆದಿದ್ದು, ತನಿಖೆ ಕೈಗೊಂಡಿದ್ದಾರೆ.
ಇನ್ನು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಆ ಮಹಿಳೆ ಮಕ್ಕಳ ಕಳ್ಳಿಯಲ್ಲ…ಭಿಕ್ಷುಕಿಯಾಗಿದ್ದಾಳೆಂಬುದು ತಿಳಿದು ಬಂದಿದೆ. ಈ ಗೊಂದಲ ಸೃಷ್ಠಿಯಾಗಿದ್ದು ವಾಟ್ಸಪ್’ನಲ್ಲಿ ವೈರಲ್ ಆದ ಸಂದೇಶದಿಂದ. ಜನರು ವಾಟ್ಸಪ್ ವದಂತಿಗಳನ್ನ ನಂಬದಿರಿ ಎಂದು ನಗರ ಕಮಿಷ್ನರ್ ಭೂಷಣ್ ಬೋರಸೆ ಅವರು ಹೇಳಿದ್ದಾರೆ.
