ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ವೈದ್ಯಾಧಿಕಾರಿಗಳು, ನೌಕರರ ಬೇಡಿಕೆಗಳನ್ನು ಈಡೇರಿಸುವಲ್ಲಿ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದು, ಅನಿವಾರ್ಯವಾಗಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವುದಾಗಿ ಒತ್ತಾಯಿಸಿ ಶುಕ್ರವಾರ ಕರ್ನಾಟಕ ರಾಜ್ಯ ವೈದ್ಯಾಧಿಕಾರಿಗಳ ಸಂಘ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೀಮಿತವಾದ ತಾಂತ್ರಿಕ ಹುದ್ದೆಗಳಾದ ರಾಜ್ಯದ ಮಹಾನಗರ ಪಾಲಿಕೆಯ ಕೆಲವು ಹುದ್ದೆಗಳು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ, ಕರ್ನಾಟಕ ರಾಜ್ಯ ವೈದ್ಯಕೀಯ ಔಷಧ ಸರಬರಾಜು ನಿಗಮದ ವೈದ್ಯರು ಮತ್ತು ಇತರೆ ಸಿಬ್ಬಂದಿಗಳ ಹುದ್ದೆಯನ್ನು ತಾಂತ್ರಿಕ ಜ್ಞಾನದ ಅರಿವಿಲ್ಲದ ಅಧಿಕಾರಿಗಳಿಗೆ ನೀಡಲಾಗಿದ್ದು, ಇದರಿಂದ ಸದರಿ ಸಂಸ್ಥೆಗಳಲ್ಲಿ ಕಾರ್ಯವೈಖರಿ ಸಮರ್ಪಕವಾಗದೇ ಸಾರ್ವಜನಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಆದ್ದರಿಂದ ಈ ಹುದ್ದೆಗಳನ್ನು ಆಕುಕ ಇಲಾಖೆಯ ಅಧಿಕಾರಿ, ನೌಕರರನ್ನೇ ನಿಯೋಜಿಸಬೇಕು ಎಂದು ಆಗ್ರಹಿಸಿದರು.
ಮಂಜೂರಾದ ಹುದ್ದೆಗಳಿಗೆ ಗುತ್ತಿಗೆ ವೈದ್ಯರು, ನೌಕರರ ನೇಮಕಾತಿ ಮಾಡಿಕೊಂಡು 3 ವರ್ಷ ಪೂರೈಸಿದ ಗುತ್ತಿಗೆ ವೈದ್ಯರು, ನೌಕರರನ್ನು ಖಾಯಂಗೊಳಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸದರಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಗುತ್ತಿಗೆ ವೈದ್ಯರು ಮತ್ತು ನೌಕರರು ಸೇವಾ ಭದ್ರತೆ ಇಲ್ಲದೇ ಅತಂತ್ರ ವಾತಾವರಣದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ಈ ಹಿಂದಿನಂತೆ ಗುತ್ತಿಗೆ ವೈದ್ಯರು, ನೌಕರರನ್ನು ಖಾಯಂಗೊಳಿಸುವುದು. ಈಗಾಗಲೇ ಖಾಯಂಗೊಂಡ ಗುತ್ತಿಗೆ ವೈದ್ಯರಿಗೆ ಅವರು ಸಲ್ಲಿಸಿದ ಗುತ್ತಿಗೆ ಸೇವೆಯನ್ನು ಪಿಂಚಣಿ ಸೌಲಭ್ಯಕ್ಕೆ ಪರಿಗಣಿಸಬೇಕೆಂದು ಒತ್ತಾಯಿಸಿದರು.
