ಭಾರತೀಯ ಸೇನೆಯಲ್ಲಿ ಬರೋಬ್ಬರಿ ಎರಡು ದಶಕಗಳಿಗೂ ಹೆಚ್ಚು ಕಾಲ ತಾಯ್ನಾಡಿನ ರಕ್ಷಣೆ ಮಾಡಿ ಬೆಳಗಾವಿಯ ಹೆಮ್ಮೆಯ ಪುತ್ರ ಸಂಜಯ್ ಅಶೋಕ್ ಪಾಟೀಲ್ ಇಂದು ಸ್ವಗ್ರಾಮಕ್ಕೆ ಮರಳಿದ್ದಾರೆ. ದೇಶದ ಗಡಿ ಕಾಯ್ದು ನಿವೃತ್ತರಾಗಿ ಬಂದ ವೀರ ಯೋಧನಿಗೆ ಗ್ರಾಮಸ್ಥರು ಹಾಗೂ ಮಾಜಿ ಸೈನಿಕ ಸಂಘಟನೆಗಳು ಭವ್ಯ ಸ್ವಾಗತ ಕೋರಿ ಗೌರವ ಸಲ್ಲಿಸಿವೆ.

ಬೆಳಗಾವಿ ತಾಲ್ಲೂಕಿನ ಚಲುವೆನಟ್ಟಿ ಗ್ರಾಮದ ಸಂಜಯ್ ಅಶೋಕ್ ಪಾಟೀಲ್ ಅವರು ಭಾರತೀಯ ಸೇನೆಯಲ್ಲಿ ಸತತ 24 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಇಂದು ತಾಯ್ನಾಡಿಗೆ ಮರಳಿದ್ದಾರೆ. ದೇಶದ ವಿವಿಧ ಗಡಿ ಭಾಗಗಳಲ್ಲಿ ಕಠಿಣ ಪರಿಸ್ಥಿತಿಗಳ ನಡುವೆ ಕಾರ್ಯನಿರ್ವಹಿಸಿ ನಿವೃತ್ತರಾದ ಇವರನ್ನು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಚಲುವೆನಟ್ಟಿ ಗ್ರಾಮದ ಹಾಲಿ ಮತ್ತು ಮಾಜಿ ಸೈನಿಕ ಸಂಘಟನೆಗಳ ವತಿಯಿಂದ ಸಂಜಯ್ ಪಾಟೀಲ್ ಅವರಿಗೆ ಸತ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಯೋಧನ ನಿಸ್ವಾರ್ಥ ಸೇವೆಯನ್ನು ಸ್ಮರಿಸಿ, ಗ್ರಾಮದ ಹಿರಿಯರು ಮತ್ತು ಯುವಕರು ಅವರಿಗೆ ಹಾರ ಹಾಕಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, “ಭಾರತೀಯ ಸೇನೆಯಲ್ಲಿ 24 ವರ್ಷಗಳ ಕಾಲ ಸೇವೆ ಸಲ್ಲಿಸಲು ಗಟ್ಟಿ ಎದೆಗುಂಡಿಗೆ ಬೇಕು. ಸಂಜಯ್ ಪಾಟೀಲ್ ಅವರ ಈ ಸುದೀರ್ಘ ಸಾಧನೆಯ ಹಿಂದೆ ಅವರ ಪತ್ನಿ ಮತ್ತು ಕುಟುಂಬಸ್ಥರ ಬೆಂಬಲ ಅಪಾರವಾಗಿದೆ. ಕಷ್ಟದ ಸಮಯದಲ್ಲಿ ಕುಟುಂಬ ನೀಡಿದ ಧೈರ್ಯದಿಂದಲೇ ಇಂದು ಅವರು ಯಶಸ್ವಿಯಾಗಿ ದೇಶ ಸೇವೆ ಮುಗಿಸಿ ಮರಳಿದ್ದಾರೆ,” ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಸೈನಿಕನ ಕುಟುಂಬದವರು ಭಾವುಕರಾಗಿ ಸಂಭ್ರಮ ಹಂಚಿಕೊಂಡರು.
