ಮಾಹಿತಿ ಹಕ್ಕು ಕಾಯ್ದೆಯನ್ನೇ ಅಧಿಕಾರಿಗಳು ಅಣಕಿಸುತ್ತಿರುವ ಆಘಾತಕಾರಿ ಘಟನೆ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಬೆಳಕಿಗೆ ಬಂದಿದೆ. ಗ್ರಾಮ ಪಂಚಾಯಿತಿಯ ಲೆಕ್ಕ ಕೇಳಿದ್ದಕ್ಕೆ, ದಾಖಲೆ ನೀಡುವ ಬದಲು ಹಣ ಕೊಟ್ಟು ಬಾಯಿ ಮುಚ್ಚಿಸಲು ಯತ್ನಿಸಿದ ಅಧಿಕಾರಿಗಳ ಬಣ್ಣ ಈಗ ಬಯಲಾಗಿದೆ.
ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮ ಪಂಚಾಯಿತಿಯ ಅಧಿಕಾರಿಗಳ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಆರ್ಟಿಐ ಕಾರ್ಯಕರ್ತ ಸೂರಜ್ ಕೋರೆ ಅವರು ಗ್ರಾಮ ಪಂಚಾಯಿತಿಯ 15ನೇ ಹಣಕಾಸು ಯೋಜನೆಯ ವೆಚ್ಚದ ಬಗ್ಗೆ ಮಾಹಿತಿ ಕೇಳಿದ್ದರು. ಇದಕ್ಕೆ ಪ್ರತಿಯಾಗಿ ಅಧಿಕಾರಿಗಳು 3,010 ರೂಪಾಯಿಗಳ ಚಲನ್ ಕಟ್ಟುವಂತೆ ಪತ್ರ ಕಳಿಸಿದ್ದರು. ಆದರೆ, ಸೂರಜ್ ಅವರು ಚಲನ್ ಹಣ ಕಟ್ಟಲು ಕಚೇರಿಗೆ ಹೋದಾಗ, ಅಧಿಕಾರಿಗಳು ಮಾಹಿತಿ ನೀಡುವ ಬದಲು “ಈಗಾಗಲೇ ಅರ್ಜಿ ವಾಪಸ್ ತಗೊಂಡಿದ್ದೀವಿ ಅಂತ ಬರೆದುಕೊಡಿ, ಈ ಒಂದು ಸಾವಿರ ರೂಪಾಯಿ ಇಟ್ಟುಕೊಳ್ಳಿ ಎಂದು ಹಣದ ಆಮಿಷವೊಡ್ಡಿದ್ದಾರೆ.

ಅಧಿಕಾರಿಗಳು ಹಣದ ಆಮಿಷವೊಡ್ಡುತ್ತಿರುವ ದೃಶ್ಯಗಳನ್ನು ಸೂರಜ್ ಕೋರೆ ಅವರು ತಮ್ಮ ಮೊಬೈಲ್ನಲ್ಲಿ ರಹಸ್ಯವಾಗಿ ಸೆರೆ ಹಿಡಿದಿದ್ದಾರೆ. ಚಲನ್ ಹಣ ಪಡೆದು ಮಾಹಿತಿ ನೀಡಬೇಕಾದ ಅಧಿಕಾರಿಗಳು, ಭ್ರಷ್ಟಾಚಾರವನ್ನು ಮುಚ್ಚಿಡಲು ಲಂಚ ನೀಡಲು ಮುಂದಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಆರ್ಟಿಐ ಕಾರ್ಯಕರ್ತ ಸೂರಜ್ ಕೋರೆ ಆಕ್ರೋಶ ಹೊರಹಾಕಿದ್ದು, ಕರ್ತವ್ಯ ಲೋಪ ಎಸಗಿದ ಮತ್ತು ಲಂಚ ನೀಡಲು ಮುಂದಾದ ಅಧಿಕಾರಿಗಳ ಮೇಲೆ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

