ಮಹಾಶಿವರಾತ್ರಿಯ ಭಕ್ತಿಪೂರ್ವಕ ಆಚರಣೆಯ ನಡುವೆ ಬೆಳಗಾವಿಯ ಶ್ರೀನಗರದಲ್ಲಿ ಇಂದು ಆರೋಗ್ಯದ ಹೊನಲು ಹರಿಯಿತು. ಶ್ರೀ ಶಿವಾಂಜನೇಯ ಸೇವಾ ಅಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ಆರೋಗ್ಯ ಶಿಬಿರವು ಯಶಸ್ವಿಯಾಗಿ ಸಂಪನ್ನಗೊಂಡಿದ್ದು, ನೂರಾರು ಜನ ಸಾಮಾನ್ಯರು ಇದರ ಲಾಭ ಪಡೆದರು.


ಬೆಳಗಾವಿಯ ಶ್ರೀನಗರದ ವೀರ ರಾಣಿ ಕಿತ್ತೂರು ಚನ್ನಮ್ಮ ಹೌಸಿಂಗ್ ಸೊಸೈಟಿಯ ಶ್ರೀ ಶಿವಾಂಜನೇಯ ಸಾಂಸ್ಕೃತಿಕ ಭವನದಲ್ಲಿ ಇಂದು ನಡೆದ ಬೃಹತ್ ಉಚಿತ ಆರೋಗ್ಯ ಶಿಬಿರವು ಸಾರ್ವಜನಿಕರಿಂದ ಅಭೂತಪೂರ್ವ ಪ್ರತಿಕ್ರಿಯೆ ಪಡೆಯಿತು. ಬಿಜೆಪಿ ಮುಖಂಡ ಡಾ. ರವಿ ಪಾಟೀಲ ಅವರು ಶಿಬಿರಕ್ಕೆ ಚಾಲನೆಯನ್ನು ನೀಡಿದರು.

ಶ್ರೀ ಶಿವಾಂಜನೇಯ ಸೇವಾ ಅಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಈ ಶಿಬಿರದಲ್ಲಿ ನೂರಾರು ಜನರು ಪಾಲ್ಗೊಂಡು ರಕ್ತದೊತ್ತಡ, ಮಧುಮೇಹ, ಕಣ್ಣಿನ ಪರೀಕ್ಷೆ ಹಾಗೂ ಮೂಳೆ ರೋಗಗಳಿಗೆ ಸಂಬಂಧಿಸಿದಂತೆ ತಜ್ಞ ವೈದ್ಯರಿಂದ ಉಚಿತ ತಪಾಸಣೆ ಮತ್ತು ಸಲಹೆಗಳನ್ನು ಪಡೆದುಕೊಂಡರು. ಬೆಳಿಗ್ಗೆಯಿಂದಲೇ ನೂರಾರು ಜನ ಆಗಮಿಸಿ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಈ ಸಂದರ್ಭದಲ್ಲಿ ನಗರಸೇವಕರಾದ ಲಕ್ಷ್ಮೀ ಮಹಾದೇವ ರಾಠೋಡ್. ಬಿಜೆಪಿ ಮುಖಂಡ ಮಹಾದೇವ ರಾಠೋಡ್ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದು ವೈದ್ಯಕೀಯ ತಂಡದ ಸೇವೆಯನ್ನು ಶ್ಲಾಘಿಸಿದರು. ಶಿವರಾತ್ರಿಯ ಈ ಸಂದರ್ಭದಲ್ಲಿ ಆರೋಗ್ಯ ಸೇವೆ ನೀಡಿದ ಸಂಘದ ಕಾರ್ಯವೈಖರಿಗೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ನಾಳೆ ಶಿವಲಿಂಗೇಶ್ವರಿನಿಗೆ ಅಭಿಷೇಕ ಮತ್ತು ವಿಶೇಷ ಉಪನ್ಯಾಸ ನಡೆಯಲಿದೆ.

