BELAGAVI

ಪಕ್ಷದ ಡ್ಯಾಮೇಜ್ ತಪ್ಪಿಸಲು ಹೈಕಮಾಂಡ್ ಭೇಟಿ: ದೆಹಲಿ ಪ್ರವಾಸದ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ!

Share

ರಾಜ್ಯ ಕಾಂಗ್ರೆಸ್‌ನಲ್ಲಿನ ಆಂತರಿಕ ವಿದ್ಯಮಾನಗಳ ಕುರಿತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಇಂದು ಮಹತ್ವದ ಸ್ಫೋಟಕ ಮಾಹಿತಿ ನೀಡಿದ್ದಾರೆ. ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ವಿಚಾರವಾಗಿ ಮಾತನಾಡಿದ ಅವರು, ಪಕ್ಷದಲ್ಲಿನ ಗೊಂದಲಗಳಿಗೆ ತೆರೆ ಎಳೆಯದಿದ್ದರೆ ಮುಂದೆ ಕಠಿಣ ಪರಿಸ್ಥಿತಿ ಎದುರಾಗಲಿದೆ ಎಂದು ಎಚ್ಚರಿಸಿದ್ದಾರೆ.

ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ಕೆಲ ಶಾಸಕರ ನಡೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿತ್ತು. ಈ ಬಗ್ಗೆ ಇಂದು ಪ್ರತಿಕ್ರಿಯಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಕಳೆದ ಆರು ತಿಂಗಳಿನಿಂದ ಪಕ್ಷದಲ್ಲಿ ಮನೆಮಾಡಿರುವ ಗೊಂದಲಗಳನ್ನು ನಿವಾರಿಸುವಂತೆ ನಾವು ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದೇವೆ ಎಂದರು. “ಒಂದು ವೇಳೆ ಗೊಂದಲಗಳು ಹೀಗೆಯೇ ಮುಂದುವರೆದರೆ ಪಕ್ಷಕ್ಕೆ ಭಾರಿ ಹಿನ್ನಡೆಯಾಗುವ ಸಾಧ್ಯತೆಯಿದೆ. ಇದನ್ನು ಸರಿಪಡಿಸುವುದಾಗಿ ಮಲ್ಲಿಕಾರ್ಜುನ ಖರ್ಗೆ ಅವರು ನಮಗೆ ಸ್ಪಷ್ಟ ಸಂದೇಶ ನೀಡಿದ್ದಾರೆ” ಎಂದು ಜಾರಕಿಹೊಳಿ ವಿವರಿಸಿದರು.
ಇನ್ನು ಶಾಸಕರ ಈ ತಂಡ ಸಿಎಂ ಸಿದ್ದರಾಮಯ್ಯ ಪರವಾಗಿ ದೆಹಲಿಗೆ ಹೋಗಿತ್ತೇ ಎಂಬ ಪ್ರಶ್ನೆಗೆ ಖಡಕ್ ಆಗಿ ಉತ್ತರಿಸಿದ ಸಚಿವರು, “ನಾವು ಅಲ್ಲಿಗೆ ಯಾರ ವೈಯಕ್ತಿಕ ಪರವಾಗಿಯೂ ಹೋಗಿಲ್ಲ. ಕೇವಲ ಪಕ್ಷದ ಹಿತ ಕಾಪಾಡಲು ಮತ್ತು ಗೊಂದಲ ನಿವಾರಣೆ ಮಾಡಲು ಮಾತ್ರ ದೆಹಲಿಗೆ ಹೋಗಿದ್ದೆವು” ಎಂದು ಸ್ಪಷ್ಟಪಡಿಸಿದರು. ಸಚಿವರ ಈ ಹೇಳಿಕೆ ಇದೀಗ ಕಾಂಗ್ರೆಸ್ ಪಾಳಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

Tags:

error: Content is protected !!