ಇಂದು ನಾಡಿನೆಲ್ಲೆಡೆ ಸಂಭ್ರಮದ ಶಿವರಾತ್ರಿ ಆಚರಣೆ ಮಾಡಲಾಗುತ್ತಿದ್ದು, ಅದೇ ರೀತಿ ಪೇಢಾ ನಗರಿ ಧಾರವಾಡದಲ್ಲಿ ಶಿವನ ಆರಾಧನೆ ಜೊತೆಗೆ ಶಿವನ ಹೆಸರಿನಲ್ಲಿ ಉಪವಾಸ ವೃತವನ್ನೂ ಮಾಡುವ ಮೂಲಕ ದೇವರ ಕೃಪೆಗೆ ಪಾತ್ರರಾಗುವುದರ ಜತೆಗೆ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಮಾಡಿದರು.

ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾದ ಧಾರವಾಡದ ಸೋಮೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಸಂಭ್ರಮ ಮನೆ ಮಾಡಿತ್ತು. ಶಾಲ್ಮಲಾ ನದಿ ತಟದಲ್ಲಿರುವ ಈ ಸೋಮೇಶ್ವರ ದೇವಸ್ಥಾನ ಐತಿಹಾಸಿಕ ಹಿನ್ನೆಲೆಯುಳ್ಳಂತದ್ದು. ಪ್ರತಿ ಶಿವರಾತ್ರಿ ಈ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿ ಸೋಮೇಶ್ವರನ ದರ್ಶನ ಪಡೆಯುತ್ತಾರೆ. ಅಲ್ಲದೇ ಇದು ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿದೆ. ಶನಿವಾರ ಮಧ್ಯರಾತ್ರಿಯಿಂದಲೇ ಸೋಮೇಶ್ವರನ ದರ್ಶನಕ್ಕೆ ಭಕ್ತರು ಆಗಮಿಸಿದ್ದು ವಿಶೇಷ. ಸುಡುವ ಬಿಸಿಲನ್ನೂ ಲೆಕ್ಕಿಸದೇ ಭಕ್ತರು ಸರತಿ ಸಾಲಿನಲ್ಲಿ ನಿಂತು ಸೋಮೇಶ್ವರನ ದರ್ಶನ ಪಡೆದರು. ದರ್ಶನ ಪಡೆಯುವ ವೇಳೆ ಭಕ್ತರು ಶಿವಲಿಂಗಕ್ಕೆ ಬಿಲ್ವ ಪತ್ರೆ ಹಾಕಿ ಕ್ಷೀರಾಭಿಷೇಕವನ್ನೂ ಮಾಡಿದರು. ಈ ದಿನ ಶಿವನಿಗೆ ಇಷ್ಟವಾದ ದಿನ. ಹೀಗಾಗಿಯೇ ಈ ದಿನವನ್ನು ಶಿವನರಾತ್ರಿ ಅಥವಾ ಶಿವರಾತ್ರಿ ಎಂದು ಕರೆಯಲಾಗುತ್ತದೆ. ಈ ದಿನ ಸೋಮೇಶ್ವರ ದೇವಸ್ಥಾನದಲ್ಲಿ ಜಾಗರಣೆ ಕೂಡ ನಡೆಯಲಿದೆ. ದೇವಸ್ಥಾನಕ್ಕೆ ಬರುವ ಭಕ್ತರು ಶಿವನ ಹೆಸರಿನಲ್ಲಿ ಈ ದಿನ ಉಪವಾಸ ವೃತ ಮಾಡುತ್ತಾರೆ. ಉಪವಾಸ ವೃತ ಕೈಗೊಂಡ ಭಕ್ತರಿಗೆ ದೇವಸ್ಥಾನದ ಆವರಣದಲ್ಲಿ ಅನೇಕ ಭಕ್ತರು, ಖರ್ಜೂರ, ಬಾಳೆಹಣ್ಣು, ದ್ರಾಕ್ಷಿ ಹಣ್ಣುಗಳನ್ನು ವಿತರಣೆ ಮಾಡುವ ದೃಶ್ಯ ಕೂಡ ಕಂಡು ಬಂತು. ಒಟ್ಟಾರೆ ಧಾರವಾಡದ ಸೋಮೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಸಂಭ್ರಮ ಮನೆ ಮಾಡಿದ್ದು, ಇದೇ ದಿನದಂದು ಸಾವಿರಾರು ಭಕ್ತರು ಶಿವಲಿಂಗವನ್ನು ಮುಟ್ಟಿ ಶಿವನ ಕೃಪೆಗೆ ಪಾತ್ರರಾದರು.

