• ಬೆಳಗಾವಿ ಜಿಲ್ಲಾ ಹಾಕಿ ತಂಡದ ಆಯ್ಕೆ
• ಲೇಲೆ ಮೈದಾನದಲ್ಲಿ ಕ್ರೀಡಾಪಟುಗಳ ಸಂಭ್ರಮ
• ರಮಾಕಾಂತ್ ಕೊಂಡುಸ್ಕರ್ ಅವರಿಂದ ಶುಭ ಹಾರೈಕೆ
• ಗೆಲುವಿನ ಸಂಕಲ್ಪದೊಂದಿಗೆ ಹೊರಟ ಹಾಕಿ ತಂಡ

ಬೆಳಗಾವಿಯ ಟಿಳಕವಾಡಿಯ ಲೇಲೆ ಮೈದಾನದಲ್ಲಿ ಇಂದು ಹಾಕಿ ಬೆಳಗಾವಿ ವತಿಯಿಂದ ಜಿಲ್ಲೆಯನ್ನು ಪ್ರತಿನಿಧಿಸುವ ಹಾಕಿ ತಂಡಗಳಿಗೆ ಭವ್ಯ ಬೀಳ್ಕೊಡುಗೆ ನೀಡಲಾಯಿತು. ಮುಂಬರುವ ಪಂದ್ಯಾವಳಿಗಳಿಗಾಗಿ ಸಜ್ಜಾಗಿರುವ ಕ್ರೀಡಾಪಟುಗಳ ಆತ್ಮವಿಶ್ವಾಸ ಹೆಚ್ಚಿಸಲು ಗಣ್ಯರು ಹರಸಿದರು.
ಬೆಳಗಾವಿ ಜಿಲ್ಲೆಯನ್ನು ಪ್ರತಿನಿಧಿಸಲು ಆಯ್ಕೆಯಾಗಿರುವ ಹಾಕಿ ಬಾಲಕ ಮತ್ತು ಬಾಲಕಿಯರ ತಂಡಗಳಿಗೆ ಶುಭ ಹಾರೈಸಲು ಟಿಳಕವಾಡಿಯ ಲೇಲೆ ಮೈದಾನದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶ್ರೀರಾಮ ಸೇನಾ ಹಿಂದುಸ್ತಾನ ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ನಾಯಕ ರಮಾಕಾಂತ್ ಕೊಂಡುಸ್ಕರ್ ಅವರು ಪಾಲ್ಗೊಂಡು ಕ್ರೀಡಾಪಟುಗಳನ್ನು ಹುರಿದುಂಬಿಸಿದರು. “ನಮ್ಮ ಜಿಲ್ಲೆಯ ಪ್ರತಿಭೆಗಳು ಮೈದಾನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಜಿಲ್ಲೆಗೆ ಕೀರ್ತಿ ತರಲಿ” ಎಂದು ಅವರು ಆಶಿಸಿದರು.
ಈ ಸಂದರ್ಭದಲ್ಲಿ ಹಾಕಿ ಬೆಳಗಾವಿಯ ಅಧ್ಯಕ್ಷ ಗುಳಪ್ಪ ಹೊಸಮನಿ, ಕಾರ್ಯದರ್ಶಿ ಸುಧಾಕರ್ ಚಾಳಕೆ, ಉಪಾಧ್ಯಕ್ಷ ಪ್ರಕಾಶ್ ಕಾಳಕುಂದ್ರಿಕರ್, ಜಂಟಿ ಕಾರ್ಯದರ್ಶಿ ಸಾಗರ್ ಪಾಟೀಲ್, ಮನೋಹರ್ ಪಾಟೀಲ್, ನಾಮದೇವ್ ಪಾಟೀಲ್ ಮತ್ತು ತರಬೇತುದಾರರಾದ ಉತ್ತಮ್ ಶಿಂದೆ, ಪ್ರಕಾಶ್ ಬೆಳಗೋಜಿ ಸೇರಿದಂತೆ ಹಾಕಿ ಪ್ರೇಮಿಗಳು ಉಪಸ್ಥಿತರಿದ್ದರು.
