ಬೈಲಹೊಂಗಲ ಪಟ್ಟಣದ ಶಿಕ್ಷಣ ಕ್ಷೇತ್ರದ ಹರಿಕಾರರಾದ ಗಂಗಾಧರ ಮಹಾಸ್ವಾಮಿಗಳವರ ಜಯಂತಿ ಹಾಗೂ ಮಹಾಶಿವರಾತ್ರಿ ಪ್ರಯುಕ್ತ ಹತ್ತು ದಿನಗಳ ಕಾಲ ಅದ್ದೂರಿ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ ನಡೆದಿದೆ.


ಬೈಲಹೊಂಗಲ ಪಟ್ಟಣದ ಶಿಕ್ಷಣ ಪ್ರೇಮಿ, ಪೂಜ್ಯ ಗಂಗಾಧರ ಮಹಾಸ್ವಾಮಿಗಳವರ 73ನೇ ಜಯಂತಿ ಮಹೋತ್ಸವ ಹಾಗೂ ಮಹಾಶಿವರಾತ್ರಿ ಉತ್ಸವದ ಅಂಗವಾಗಿ, ನೀಲಕಂಠ ಮಹಾಶಿವಯೋಗೀಶ್ವರ ಜಾತ್ರಾ ಮಹೋತ್ಸವವನ್ನು ಫೆಬ್ರವರಿ 05ರಿಂದ 15, 2026ರ ವರೆಗೆ ಅತ್ಯಂತ ಭಕ್ತಿಭಾವದಿಂದ ಆಚರಿಸಲಾಗುತ್ತಿದೆ. ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಶ್ರೀ ಮ. ನೀ. ಪ್ರ. ಪ್ರಭು ನೀಲಕಂಠ ಮಹಾಸ್ವಾಮಿಗಳು, ಜಾತ್ರೆಯ ಹತ್ತು ದಿನಗಳ ಕಾಲ ಪ್ರತಿದಿನ ಸಂಜೆ ‘ಉಳವಿ ಶ್ರೀ ಚನ್ನಬಸವೇಶ್ವರ ಪುರಾಣ’ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಜಾತ್ರೆಯ ಸಮಾರೋಪದ ದಿನದಂದು ಅದ್ದೂರಿ ಮಹಾ ರಥೋತ್ಸವ ನೆರವೇರಲಿದ್ದು, ರಾಜ್ಯದ ವಿವಿಧ ಭಾಗಗಳ ಗಣ್ಯರು ಹಾಗೂ ಸಾಧಕರು ಈ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಈ ಬಾರಿಯ ಜಾತ್ರೆಯ ವಿಶೇಷವೆಂದರೆ, ಧಾರ್ಮಿಕ ವಿಧಿವಿಧಾನಗಳ ಜೊತೆಗೆ ಆಧುನಿಕತೆಗೆ ತೆರೆದುಕೊಳ್ಳುತ್ತಿರುವ ಮೂರುಸಾವಿರ ಮಠದ ಅಧಿಕೃತ ವೆಬ್ಸೈಟ್ನ್ನು ಲೋಕಾರ್ಪಣೆಗೊಳಿಸಲಾಗುತ್ತಿದೆ. ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ವೇದಿಕೆಗಳ ಮೂಲಕ ಈ ಬಾರಿಯ ಉತ್ಸವವನ್ನು ವಿಶಿಷ್ಟವಾಗಿ ಆಯೋಜಿಸಲಾಗಿದೆ. ಇದರೊಂದಿಗೆ, ಪರೀಕ್ಷಾ ತಯಾರಿಯಲ್ಲಿರುವ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಶ್ರೀಗಳು ವಿಶೇಷವಾಗಿ ‘ಮನಸಿದ್ದರೆ ಮಾರ್ಗ’ ಎಂಬ ಸಂದೇಶ ನೀಡಿದ್ದಾರೆ. ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ, ನಾಡಿಗೆ ಕೀರ್ತಿ ತರಬೇಕೆಂದು ಕರೆ ನೀಡುವ ಮೂಲಕ ಶಿಕ್ಷಣದ ಬಗ್ಗೆ ತಮ್ಮ ಕಾಳಜಿಯನ್ನು ಪುನರುಚ್ಚರಿಸಿದ್ದಾರೆ.
