ಬಾಗಲಕೋಟೆ ಜಿಲ್ಲೆಯಲ್ಲಿ ದಿನೇ ದಿನೇ ಸೈಬರ್ ವಂಚನೆ ಪ್ರಕರಣಗಳು ಮಿತಿ ಮೀರುತ್ತಿದ್ದು, ಅದರಲ್ಲೂ ಓದಿದವರೇ ಖದೀಮರ ಬಲೆಗೆ ಬೀಳುತ್ತಿರುವುದು ಆತಂಕಕಾರಿಯಾಗಿದೆ. ಓಟಿಪಿ ಫ್ರಾಡ್, ಡಿಜಿಟಲ್ ಅರೆಸ್ಟ್ ಹಾಗೂ ಹೂಡಿಕೆ ಹೆಸರಿನಲ್ಲಿ ಜಿಲ್ಲೆಯ ಪ್ರಜ್ಞಾವಂತ ಜನರು ಬರೋಬ್ಬರಿ 8 ಕೋಟಿ ರೂಪಾಯಿಗೂ ಅಧಿಕ ಹಣ ಕಳೆದುಕೊಂಡಿದ್ದಾರೆ.

ವಂಚಕರು ಈ ಬಾರಿ ಮಿಡ್ಲ್ ಕ್ಲಾಸ್ ಜನರಿಗಿಂತ ಹೆಚ್ಚಾಗಿ *ಇಂಜಿನಿಯರ್ಗಳು, ವೈದ್ಯರು, ಸರ್ಕಾರಿ ನೌಕರರು, ಉದ್ಯಮಿಗಳು ಹಾಗೂ ನಿವೃತ್ತ ನೌಕರರನ್ನೇ* ಗುರಿಯಾಗಿಸಿಕೊಂಡಿದ್ದಾರೆ. ಹಣ ದುಪ್ಪಟ್ಟು ಮಾಡುವ ಆಸೆ ತೋರಿಸಿ ಮೊದಲು 10-15 ಸಾವಿರ ಲಾಭ ನೀಡಿ ನಂಬಿಕೆ ಗಳಿಸಿ, ನಂತರ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿಸಿ ಎಸ್ಕೇಪ್ ಆಗುತ್ತಿದ್ದಾರೆ. ಸಾವಿರದಿಂದ ಶುರುವಾಗಿ 4 ಕೋಟಿ ರೂಪಾಯಿವರೆಗೂ ಹಣ ಕಳೆದುಕೊಂಡ ವರದಿಗಳು ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.
ತನಿಖೆಗೆ ಇಳಿದ ಪೊಲೀಸರಿಗೆ ಈ ಹಣ ಉತ್ತರ ಪ್ರದೇಶ, ಬಿಹಾರ ಹಾಗೂ ರಾಜಸ್ಥಾನದಂತಹ ರಾಜ್ಯಗಳ ವಿವಿಧ ಬ್ಯಾಂಕ್ ಖಾತೆಗಳಿಗೆ ರವಾನೆಯಾಗಿರುವುದು ಕಂಡುಬಂದಿದೆ. ವಾಟ್ಸಾಪ್ ಹಾಗೂ ಟೆಲಿಗ್ರಾಮ್ ಗ್ರೂಪ್ಗಳ ಮೂಲಕ ಆಪ್ಗಳನ್ನು ಡೌನ್ಲೋಡ್ ಮಾಡಿಸಿ ಈ ಜಾಲ ಕಾರ್ಯನಿರ್ವಹಿಸುತ್ತಿದೆ.
“ಸಾರ್ವಜನಿಕರು ಆನ್ಲೈನ್ ಹೂಡಿಕೆ ಮಾಡುವ ಮುನ್ನ ಎಚ್ಚರವಹಿಸಬೇಕು. ಹೆಚ್ಚಿನ ಲಾಭದ ಆಸೆಗೆ ಬಿದ್ದು ಅಪರಿಚಿತ ಲಿಂಕ್ಗಳ ಮೂಲಕ ಹಣ ಹೂಡಿಕೆ ಮಾಡಬೇಡಿ. ವಂಚನೆಯಾದ ತಕ್ಷಣ ಪೋಲಿಸರಿಗೆ ಮಾಹಿತಿ ನೀಡಿ,” ಎಂದು ಬಾಗಲಕೋಟೆ *ಎಸ್ಪಿ ಸಿದ್ಧಾರ್ಥ ಗೋಯಲ್* ಮನವಿ ಮಾಡಿದ್ದಾರೆ.
