ಕಾಗವಾಡ ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 50 ಕೋಟಿ ರೂಪಾಯಿಗಳ ವಿಶೇಷ ಅನುದಾನ ಮಂಜೂರು ಮಾಡಿದ್ದಾರೆ. ಈ ಪೈಕಿ 36 ಕೋಟಿ ರೂಪಾಯಿ ಲೋಕೋಪಯೋಗಿ ಇಲಾಖೆಯ ಮೂಲಕ ಹಾಗೂ ಸುಮಾರು 14 ಕೋಟಿ ರೂಪಾಯಿ ಜಿಲ್ಲಾ ಪಂಚಾಯತ್ ಮೂಲಕ ರಸ್ತೆಗಳ ಅಭಿವೃದ್ಧಿ ಮತ್ತು ಸಮಾಜ ಭವನಗಳ ನಿರ್ಮಾಣಕ್ಕೆ ಬಳಕೆಯಾಗಲಿದೆ ಎಂದು ಶಾಸಕ ರಾಜು ಕಾಗೆ ತಿಳಿಸಿದರು.

ಬುಧವಾರದಂದು ಮಂಗಸೂಳಿಯಲ್ಲಿ ಅರಣ್ಯ ಇಲಾಖೆ ವತಿಯಿಂದ ಸುಮಾರು 60 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಉದ್ಯಾನವನದ ಕಾಂಪೌಂಡ್ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಅದಕ್ಕೂ ಮುನ್ನ ಉಗಾರದ ಮುಖ್ಯ ರಸ್ತೆಯಿಂದ ಭಗತ್ ಸಿಂಗ್ ಚೌಕದವರೆಗೆ 40 ಲಕ್ಷ ರೂಪಾಯಿ ವೆಚ್ಚದ ರಸ್ತೆ ನಿರ್ಮಾಣ ಹಾಗೂ ಲಕ್ಷ್ಮಿ ಗುಡಿಯಿಂದ ಮುಂಗಸೂಳಿ ಮುಖ್ಯ ರಸ್ತೆಯವರೆಗೆ 40 ಲಕ್ಷ ರೂಪಾಯಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಭೂಮಿಪೂಜೆ ನೆರವೇರಿಸಿದರು.
ಬರುವ ದಿನಗಳಲ್ಲಿ ಕ್ಷೇತ್ರದ ‘ಏಳು ಕೆರೆ ತುಂಬುವ ಯೋಜನೆ’ಗೆ ಭೂಮಿಪೂಜೆ ನೆರವೇರಿಸಲಾಗುವುದು. ಸರ್ಕಾರವು ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಕ್ಷೇತ್ರದ ಪ್ರಗತಿಯನ್ನು ಹಂತ ಹಂತವಾಗಿ ಕೈಗೊಳ್ಳಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ಉಗಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೃಷ್ಣಾ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಶಂಕರ್ ವಾಘಮೋಡೆ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಜಗತಾಪ್, ಮುಖ್ಯಾಧಿಕಾರಿ ಮಾಂತೇಶ್ ಕೊಲ್ಲಾಪುರ, ಪಟ್ಟಣ ಪಂಚಾಯಿತಿ ಸದಸ್ಯರಾದ ಮಹದೇವ್ ವಡಗಾವೆ, ಪ್ರಫುಲ್ ಥೋರುಶೆ, ವಿಜಯ ಹಸುದೆ, ಮಹದೇವ್ ಕಟಗೇರಿ, ಬಾಳು ವೀಸಾಪುರ, ಸಂಜಯ್ ಶಿಂದೆ, ಪ್ರದೀಪ್ ಚಿಂಚವಾಡೆ, ದಿಲೀಪ್ ಹುಲ್ಲೋಳಿ, ಅಮರ ಜಗತಾಪ್, ಬಸು ಸಂಗವೆ, ಅಭಿಯಂತರ ದಸ್ತಗಿರ್ ಪಠಾಣ್, ಗುತ್ತಿಗೆದಾರರಾದ ಎಂ.ಎಚ್. ನದಾಫ್, ಅಲ್ತಾಫ್ ನದಾಫ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮಂಗಸೂಳಿ ಸಮಾರಂಭದಲ್ಲಿ ಅರಣ್ಯ ಇಲಾಖೆ ಅಧಿಕಾರಿ ರಾಕೇಶ್ ಅರ್ಜುನವಾಡೆ ಶಾಸಕರನ್ನು ಸ್ವಾಗತಿಸಿ, ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಪೂಜಾರಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಾಳು ಭಜಂತ್ರಿ, ಮುಕುಂದ ಪೂಜಾರಿ, ದಲಿತ ಮುಖಂಡ ಸಂಜಯ್ ತಳವಲಕರ್, ರವಿ ಮೇಟಗುಡ್ಡ, ರಾಕೇಶ್ ಕುಠವಾಡೆ, ಮೀರಾ ಸಾಬ್ ಸನದಿ, ಮಿಲಿಂದ್ ವರಾಳೆ, ದಿಲೀಪ್ ಮಗದುಮ್, ಸಹದೇವ್ ನಾಯ್ಕ್, ರಣಜಿತ್ ಇನಾಮ್ದಾರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
