Vijaypura

ವರದಕ್ಷಣೆ ದಾಹಕ್ಕೆ ವೈದ್ಯೆಯಾಗಿದ್ದ ಹೆಂಡತಿಯನ್ನು ಕೊಲೆ ಮಾಡಿದ ಆರೋಪ: ವೈದ್ಯ ಪರಾರಿ

Share

ವರದಕ್ಷಣೆ ಕಿರುಕುಳ ತಾಳಲಾರದೆ ವೈದ್ಯೆ ವಿವಾಹಿತ ಮಹಿಳೆಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ವಿಜಯಪುರ ನಗರದ ಗೌರಿಶಂಕರ ಬಡಾವಣೆಯ ನಿವಾಸಿ ಸವಿತಾ ಶಿರಸ್ಯಾಳ (30) ಶವವಾಗಿ ಪತ್ತೆಯಾಗಿದ್ದು, ಪತಿ ಬಿಎಎಮ್‌ಎಸ್ ವೈದ್ಯ ರಾಜಶೇಖರ ಶಿರಸ್ಯಾಳ, ಮೈದುನ ಹಾಗೂ ಅತ್ತೆ ಘಟನೆ ಬಳಿಕ ಪರಾರಿಯಾಗಿದ್ದಾರೆ. ಮೃತಳ ಕುಟುಂಬಸ್ಥರ ಪ್ರಕಾರ, ಸವಿತಾ ಅವರಿಗೆ ನಿರಂತರವಾಗಿ ವರದಕ್ಷಣೆಗಾಗಿ ಕಿರುಕುಳ ನೀಡಲಾಗುತ್ತಿತ್ತು.


ಒಂಬತ್ತು ವರ್ಷಗಳ ಹಿಂದೆ ಮದುವೆಯ ವೇಳೆ ಹತ್ತು ತೊಲೆ ಚಿನ್ನವನ್ನು ವರದಕ್ಷಣೆಯಾಗಿ ನೀಡಿದ್ದರೂ ಸಹ, ಪತಿ ರಾಜಶೇಖರ ಪದೇಪದೇ ಇನ್ನಷ್ಟು ಚಿನ್ನ ಹಾಗೂ ಹಣ ತರುವಂತೆ ಸವಿತಾಳನ್ನು ಒತ್ತಾಯಿಸುತ್ತಿದ್ದನೆಂದು ಸಂಬಂಧಿಕರು ಗಂಭೀರ ಆರೋಪ ಮಾಡಿದ್ದಾರೆ. ಈ ಕಿರುಕುಳವೇ ಕೊಲೆಗೆ ಕಾರಣವಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.


ಇನ್ನು, ಸವಿತಾ ಸಾವನ್ನಪ್ಪಿದ ಬಳಿಕ ಪತಿ ಹಾಗೂ ಆತನ ಕುಟುಂಬದವರು ಮನೆ ಮತ್ತು ಆಸ್ಪತ್ರೆಯಿಂದ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಶವವನ್ನು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.
ಈ ಸಂಬಂಧ ವಿಜಯಪುರ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.

Tags:

error: Content is protected !!