ಮರಾಠಾ ಸಮುದಾಯ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದಲ್ಲಿ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಮುಂದೆ ಬರಲು ಸಾಧ್ಯವಿದೆ. ದೇಶದಲ್ಲಿ ಅತ್ಯಂತ ಕಟ್ಟ ಕಡೆಯ ಸ್ಥಾನದಲ್ಲಿ ಮರಾಠಾ ಸಮುದಾಯವಿದ್ದು, ಇದನ್ನು ಮೇಲೆತ್ತಲು ಸಂಘಟನೆ ಅತ್ಯವಶ್ಯಕವಾಗಿದೆ” ಎಂದು ಕಾರ್ಮಿಕ ಸಚಿವ, ಮರಾಠಾ ಸಮಾಜದ ಮುಖಂಡ ಸಂತೋಷ ಲಾಡ್ ಹೇಳಿದರು.


ಚಿಕ್ಕೋಡಿ ಪಟ್ಟಣದ ಪದ್ಮಾ ಮಂಗಲ ಕಾರ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡ ಚಿಕ್ಕೋಡಿ ತಾಲ್ಲೂಕು ಮರಾಠಾ ಸಮಾಜ ಬಾಂಧವರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಛತ್ರಪತಿ ಶಿವಾಜಿ ಮಹಾರಾಜರು ಮುಸ್ಲಿಂ ವಿರೋಧಿಯಾಗಿರಲಿಲ್ಲ. ಇತಿಹಾಸವನ್ನು ತಿರುಚಿ ಮರಾಠಾ ಸಮಾಜದ ಯುವಕರ ದಾರಿ ತಪ್ಪಿಸುವವರ ಮಾತನ್ನು ನಂಬಬೇಡಿ. ರಾಜಕೀಯದಲ್ಲಿ ತನಗೆ ಯಾವುದೇ ಆಸಕ್ತಿ ಇಲ್ಲ. ಸಮಾಜ ಸೇವೆಯೇ ತನ್ನ ಮೊದಲ ಆದ್ಯತೆಯಾಗಿದೆ” ಇಲ್ಲಿಯವರೆಗೆ ಬಂದಿರುವ ಯಾವುದೇ ಸರ್ಕಾರ ಮರಾಠಾ ಸಮಾಜಕ್ಕೆ ವಿಶೇಷವಾದುದನ್ನು ಏನನ್ನೂ ಮಾಡಿಲ್ಲ.. ಇತರ ಸಮಾಜಕ್ಕಿಂತ ಮರಾಠಾ ಸಮಾಜ ಹಿಂದುಳಿದಿದೆ. ಸಮಾಜದ ಸಂಘಟನೆಗಾಗಿ ಹಣ ನೀಡಲು ಸಾಧ್ಯವಿಲ್ಲದೇ ಇದ್ದವರು ಸಮಯವನ್ನು ನೀಡಿ. ಸಮಾಜಕ್ಕೆ ಸಮಯ ನೀಡುವವರು ಹಣ ನೀಡಿದವರಿಗಿಂತ ದೊಡ್ಡವರು. ರಾಜ್ಯಾದ್ಯಂತ ಮರಾಠಾ ಸಮಾಜವನ್ನು ಬಲಿಷ್ಠವಾಗಿ ಕಟ್ಟಬೇಕು ಎಂಬ ಹಂಬಲವಿದೆ” ಎಂದು ಹೇಳಿದರು.

ಮಾಜಿ ಸಚಿವ ಶ್ರೀಮಂತ ಪಾಟೀಲ ಮಾತನಾಡಿ, “ಮರಾಠಾ ಸಮುದಾಯ ಒಗ್ಗೂಡಿದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ನಾವು ಸ್ವಾಭಿಮಾನದಿಂದ ಬದುಕಬೇಕಿದೆ. ಬಂಡವಾಳ ಇಲ್ಲ ಎಂದು ಸಮಾಜದ ಯುವಕರು ಕೈಕಟ್ಟಿ ಕೂಡದೇ ಕಡಿಮೆ ಬಂಡವಾಳವಿದ್ದರೂ ಉದ್ಯೋಗ ಮಾಡುವಂತಹ ಕೌಶಲ್ಯಗಳು ಇವೆ. ಅವುಗಳನ್ನು ಬಳಸಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕು” ಎಂದು ಹೇಳಿದರು.

ಮಾಜಿ ಶಾಸಕ ಅಜೀತ ನಿಂಬಾಳಕರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮರಾಠಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ ಹೆಚ್ ಮರಿಯೋಜಿರಾವ್, ಮುಖಂಡರಾದ ಬಿ ಆರ್ ಯಾದವ, ರಾಮಾ ಮಾನೆ, ಅನಿಲ ಮಾನೆ, ಬಾಳಸಾಹೇಬ ಪಾಟೀಲ, ಸುಪ್ರಿಯಾ ದೇಸಾಯಿ, ಟಿ ಎಸ್ ಮೋರೆ, ಕಾಶಿನಾಥ ಸುಳಕುಡೆ, ಕಿಶೋರ ಪವಾರ, ಜ್ಯೋತಿಬಾ ಕಾಮಕರ, ರಂಜೀತ ಶಿರಶೇಟ, ಅನಿಲ ಪಾಟೀಲ, ಅಣ್ಣಾ ಪವಾರ, ಅಪ್ಪಾಸಾಹೇಬ ಪವಾರ, ಪಾಂಡುರಂಗ ಮಾನೆ, ಅಮರ ಯಾದವ ಇತರರು ಇದ್ದರು.
