ಬೆಳಗಾವಿ ತಾಲೂಕಿನ ಗ್ರಾಮೀಣ ಮತಕ್ಷೇತ್ರದಲ್ಲಿ ವಿದ್ಯಾರ್ಥಿನಿಯ ಮೇಲೆ ಮುಖ್ಯ ಶಿಕ್ಷಕ ಲೈಂಕಿಕ ಕಿರುಕುಳ ನೀಡಿದರೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಿಟ್ಲರ್ ನೀತಿಯಿಂದ ಪ್ರಕರಣ ದಾಖಲಾಗಿಲ್ಲ ಎಂದು ಮಾಜಿ ಶಾಸಕ ಸಂಜಯ ಪಾಟೀಲ್ ಆರೋಪಿಸಿದರು.

ಈ ಕುರಿತು ಇಂದು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಿಕ್ಷಕನ ವಿರುದ್ಧ ಪೋಕ್ಸೊ ಕೇಸ್ ದಾಖಲಿಸಬೇಕಿದ್ದ ಪೊಲೀಸರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಒತ್ತಡಕ್ಕೆ ಮಣಿದು ಜಾಮಿನು ನೀಡಲು ಸಹಕಾರ ಮಾಡಿದ್ದಾರೆ. ವಿದ್ಯಾರ್ಥಿನಿ ಮೇಲೆ ಲೈಂಗಿಕ ಕಿರುಕುಳವಾದರೂ ಸೌಜನ್ಯಕ್ಕಾದರೂ ಲಕ್ಷ್ಮೀ ಹೆಬ್ಬಾಳ್ಕರ್ ಸಾಂತ್ವಾನ ಹೇಳಿಲ್ಲ ಎಂದು ಹರಿಹಾಯ್ದರು. ಪೊಲೀಸರು ದಾಖಲೆಗಳಿಲ್ಲ ಎನ್ನುತ್ತಿದ್ದಾರೆ. ಕಾಮುಕ ಶಿಕ್ಷಕ ವಿದ್ಯಾರ್ಥಿನಿಗೆ ಮಾಡಿರುವ ಮೊಬೈಲ್ ಚಾಟಿಂಗ್ ನನ್ನ ಬಳಿ ಇವೆ. ಬೇಕಿದ್ದರೆ ಪೊಲೀಸರಿಗೆ ಕೊಡುವೆ ನೊಂದ ಸಂತ್ರಸ್ತ ವಿದ್ಯಾರ್ಥಿನಿಗೆ ನ್ಯಾಯ ಕೊಡಿಸುವ ಕೆಲಸವನ್ನು ಪೊಲೀಸರು ಮಾಡಬೇಕು ಎಂದರು.
