ರಾಜ್ಯದಲ್ಲಿ ಮಾದಕವಸ್ತು ಹಾಗೂ ಡ್ರಗ್ ಮಾಫಿಯಾದಿಂದ ಕರ್ನಾಟಕ ಉಡ್ತಾ ಪಂಜಾಬ್ ಆಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

ಇಂದು ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಮಹಾರಾಷ್ಟ್ರದ ಪೊಲೀಸರು ಬಂದು ಡ್ರಗ್ ಮಾಫಿಯಾವನ್ನು ಬಯಲಿಗೆ ತರುತ್ತಿದೆ. ರಾಜ್ಯದ ಗೃಹ ಸಚಿವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ. ಡ್ರಗ್ ಮಾಫಿಯಾಗೆ ಕಡಿವಾಣ ಹಾಕಲು ಗೃಹ ಸಚಿವರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಹರಿಹಾಯ್ದರು.
ಬೆಂಗಳೂರು ಯಲಹಂಕ ಮತಕ್ಷೇತ್ರದ ಕೋಗಿಲು ಬಡಾವಣೆಯಲ್ಲಿ ಕೇರಳದಿಂದ ಬಂದ ಅಕ್ರಮ ವಲಸಿಗರು, ನಿರ್ಗಳವಾಗಿ ನಡೆಯುತ್ತಿರುವ ಡ್ರಗ್ ಮಾಫಿಯಾಗೆ ರಾಜ್ಯ ಸರಕಾರ ಮಟ್ಟ ಹಾಕುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಚಳಿಗಾಲದ ಅಧಿವೇಶನದಲ್ಲಿ ಸದ್ದು ಮಾಡಿದ್ದ ಗೃಹ ಲಕ್ಷ್ಮೀ ಯೋಜನೆ 5 ಸಾವಿರ ಕೋಟಿ ರೂಪಾಯಿಗಳು ಯಾಕೆ ಫಲಾನುಭವಿಗಳ ಖಾತೆಗೆ ಜಮೆಯಾಗಿಲ್ಲ ಎನ್ನುವುದನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಿಎಂ ಸಿದ್ದರಾಮಯ್ಯ ಯಾವುದೇ ಸ್ಪಷ್ಟಣೆ ನೀಡಿಲ್ಲ ಎಂದು ಆಪಾದಿಸಿದರು. ಗ್ಯಾರಂಟಿ ಯೋಜನೆಗೆ ಹಣ ಸಿಗುತ್ತಿಲ್ಲ ಎಂದು ಕುಡುಕರ ರಾಜ್ಯ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಟಿದ್ದಾರೆ. ರಾಜ್ಯದ ಆರನೇ ಗ್ಯಾರಂಟಿ ಯೋಜನೆ ಕುಡುಕರ ರಾಜ್ಯ ಎಂದು ಘೋಷಣೆ ಮಾಡಲಿ ಎಂದು ಸವಾಲ್ ಹಾಕಿದರು.
ಇನ್ನೂ ಬೆಂಗಳೂರಿನ ಯಲಹಂಕ ಮತಕ್ಷೇತ್ರದಲ್ಲಿ ಕೇರಳದ ವಲಸೆಗರು ಅಕ್ರಮವಾಗಿ ನೆಲಸಿದವರನ್ನು ನೆಲಸಮ ಮಾಡುವ ಕೆಲಸ ಮಾಡಿದ್ದ ಸರಕಾರ ತದನಂತರ ಕೇರಳ ಸಿಎಂ ಪಿನರಾಯ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ರಾಜ್ಯದ ಸಿಎಂ ಹಾಗೂ ಡಿಸಿಎಂಗೆ ಬೇದರಿಕೆ ಹಾಕುತ್ತಿದ್ದಾರೆ. ಇವರಿಬ್ಬರೂ ಅತಂತ್ರ ಸ್ಥಿತಿಯಲ್ಲಿದ್ದಾರೆ. ಇದರ ಪರಿಣಾಮ ನಾಲ್ಕು ದಿನದಲ್ಲಿ ಸಿಎಂ, ಡಿಸಿಎಂ ಉಲ್ಟಾ ಹೊಡೆದು. ಬಯಪ್ಪನಲ್ಲಿರುವ ರಾಜೀವಗಾಂಧಿ ಯೋಜನೆಯಲ್ಲಿ ಅವರಿಗೆ ಮನೆ ಕೊಡುವುದಾಗಿ ಘೋಷಣೆ ಮಾಡಿರುವುದು ದುರ್ದೈವದ ಸಂಗತಿ ಎಂದರು. ಬೆಂಗಳೂರಿನಲ್ಲಿರುವ ಕನ್ನಡಿಗರಿಗೆ, ಬಡವರಿಗೆ ಕೊಡಬೇಕಾದ ಮನೆಗಳನ್ನು ಅಕ್ರಮವಾಗಿ ನೆಲಸಿರುವ ವಲಸಿಗರಿಗೆ ಜನವರಿ 1 ರಂದು ಕೊಡುವುದಾಗಿ ಸರಕಾರ ಯಾವ ಆಧಾರದ ಮೇಲೆ ನೀಡುತ್ತೀರಿ ಎಂದು ಖಾರವಾಗಿ ಪ್ರಶ್ನಿಸಿದರು.
ರಾಜ್ಯದಲ್ಲಿ ಅತಿವೃಷ್ಟಿಯಿಂದ ರೈತರು ಬೆಳೆ ಹಾನಿ ಕೊಡುವ ಬದಲು ಕೇಂದ್ರ ಸರಕಾರದ ಮೇಲೆ ಬೊಟ್ಟು ಮಾಡಿದ್ದ ಕಾಂಗ್ರೆಸ್ ಸರಕಾರ ರೈತರು ಕಬ್ಬಿಗೆ ಬೆಂಬಲ ಬೆಲೆ ಘೋಷಣೆ ಮಾಡಲು ಹೋರಾಟ ನಡೆಸಿದಾಗ ಪ್ರಧಾನಮಂತ್ರಿಗೆ ಪತ್ರ ಬರೆಸಿದ್ದು ಮುಖ್ಯಮಂತ್ರಿಯ ದೊಡ್ಡ ಸಾಧನೆಯಾಗಿದೆ ಎಂದು ಹರಿಹಾಯ್ದರು.ನಿರ್ಮಾಣ ಹಂತದಲ್ಲಿರುವ 3 ಲಕ್ಷ ಮನೆಗಳನ್ನು ಬಡವರಿಗೆ ಹಂಚಲಾಗುವುದು ಎಂದು ಘೋಷಣೆ ಮಾಡಿದ್ದ ಸಿಎಂ ಈಗ ವಲಸೆ ಬಂದವರಿಗೆ ಹಂಚಲು ಹೊರಟ್ಟಿದ್ದಾರೆ. ಕಳೆದ ಎರಡೂ ವರ್ಷದಿಂದ ಎಷ್ಟು ಜನ ಬಡವರಿಗೆ ಹಾಗೂ ಕನ್ನಡಿಗರಿಗೆ ಮನೆ ಹಂಚಿಕೆ ಮಾಡಿದ್ದಾರೆ ಎಂದು ಸರಕಾರ ಸ್ಪಷ್ಟ ಪಡಿಸಲಿ ಎಂದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ, ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್, ನಗರ ಘಟಕದ ಅಧ್ಯಕ್ಷೆ ಗೀತಾ ಸುತಾರ, ಮಾಜಿ ಶಾಸಕ ಸಂಜಯ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
