ಚಿಕ್ಕೋಡಿ:ಕಬ್ಬಿನ ಬೆಳೆಗೆ ಬೆಲೆ ದರ ನಿಗದಿ ಮಾಡಲು ರೈತರಿಂದ ತೀವ್ರತೆ ಹೆಚ್ಚಿದ್ದು, ಕಬ್ಬಿನ ಬೆಲೆ ಪ್ರತಿ ಟನಗೆ ರೂ.3500 ನಿಗದಿ ಮಾಡಬೇಕೆಂದು ಆಗ್ರಹಿಸಿ ಇಂದು ವಿವಿಧ ರೈತ ಸಂಘಗಳು, ರಸಗೊಬ್ಬರ ಮಾರಾಟಗಾರರು ಮತ್ತು ಕನ್ನಡಪರ ಸಂಘಟನೆಗಳು ಸೇರಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ರಾಯಬಾಗ ಸಂಪೂರ್ಣ ಬಂದ್ ಮಾಡಲಾಯಿತು.

ಅಂಬೇಡ್ಕರ ವೃತ್ತದಿಂದ ಝೇಂಡಾ ಕಟ್ಟೆವರೆಗೆ ಪಾದಯಾತ್ರೆ ಬೃಹತ್ ಪಾದಯಾತ್ರೆ ನಡೆಸಿ ರಾಜ್ಯ ಸರಕಾರ ಹಾಗೂ ಕಾರ್ಖಾನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದರ ಜೊತೆಗೆ ಟೈಯರ್ ಗೆ ಬೆಂಕಿ ಹಾಕಿ ಬೃಹತ್ ಪ್ರತಿಭಟನೆ ನಡೆಸಿದರು.
ಇಂದು ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಬ್ದಗೊಂಡಿತು. ಬಸ್ ಗಳು ಬಂದ್ ಆಗಿದ್ದವು. ಎಲ್ಲರ ಸಹಕಾರದಿಂದ ಸ್ವಯಂ ಪ್ರೇರಿತರಿಂದ ಅಂಗಡಿಗಳನ್ನು ಬಂದ್ ಮಾಡಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು.
ಕಾರ್ಖಾನೆ ಮಾಲೀಕರು ಕಬ್ಬು ನುರಿಸಲು ಮುಂದಾದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಕೂಡಲೇ ರೈತರ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಆಗುವ ಅನಾಹುತಕ್ಕೆ ರೈತರು ಕಾರಣರಲ್ಲ ಎಂದು ಆಗ್ರಹಿಸಿದರು. ಸಹಸ್ರಾರು ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದರು. ಬಂದ್ ಸಂಪೂರ್ಣ ಯಶಸ್ವಿಯಾಯಿತು.
