ನಿಪ್ಪಾಣಿ ತಾಲೂಕಿನ ಬೇಡಕಿಹಾಳ ಗ್ರಾಮದ ಸಿದ್ದೇಶ್ವರ ಮಂದಿರದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಈ ಬಾರಿ ಅತ್ಯಂತ ಭವ್ಯವಾಗಿ ದೀಪೋತ್ಸವ ಆಚರಿಸಲಾಯಿತು. 7111 ಹಣತೆಗಳಿಂದ ಅಲಂಕರಿಸಿದ ಮಂದಿರವು ಸಾವಿರಾರು ಭಕ್ತರನ್ನು ತನ್ನತ್ತ ಸೆಳೆಯಿತು.
ಮಂದಿರದ ಕಲ್ಯಾಣ ಮಂಟಪ ಹಾಗೂ ಮುಖ್ಯ ಸಭಾಭವನದಲ್ಲಿ ರಂಗೋಲಿಯಲ್ಲಿ ಅರಳಿದ ಮಹಾಲಕ್ಷ್ಮೀ, ಕೃಷ್ಣ-ರಾಧೆ ಮತ್ತು ಕಾಂತಾರ ಚಿತ್ರವನ್ನು ನೆನಪಿಸುವ ನಂದಿ ಎದುರು ಶಿವಲಿಂಗದ ಚಿತ್ರ ಭಕ್ತರ ಮನಸೆಳೆಯಿತು. 20 ಕೆ.ಜಿ ನಾನಾ ಬಣ್ಣದ ಹೂಗಳಿಂದ ಅಲಂಕರಿಸಿದ ಭವ್ಯ ಶಿವಲಿಂಗವು ಈ ವರ್ಷದ ವಿಶೇಷ ಆಕರ್ಷಣೆ ಆಗಿತ್ತು.
‘ಗ್ರಾಮದ ಕಲ್ಯಾಣ ಸಿದ್ದೇಶ್ವರ ಯುವ ಫೌಂಡೇಶನ್ ಕಳೆದ ಏಳು ವರ್ಷಗಳಿಂದ ನಿರಂತರವಾಗಿ ಈ ದೀಪೋತ್ಸವ ಆಯೋಜಿಸುತ್ತಿದೆ. 2019ರಲ್ಲಿ ಕೇವಲ 1111 ದೀಪಗಳಿಂದ ಆರಂಭಿಸಿದ್ದೇವೆ. ಪ್ರತಿವರ್ಷ ಒಂದು ಸಾವಿರ ದೀಪಗಳನ್ನು ಹೆಚ್ಚಿಸುತ್ತಾ ಈ ವರ್ಷ 7111 ದೀಪಗಳನ್ನು ಬೆಳಗಿಸಿದ್ದೇವೆ”, ಎಂದು ಫೌಂಡೇಶನ್ ಅಧ್ಯಕ್ಷ ಸಚಿನ್ ದೇಸಾಯಿ ಹೇಳಿದರು.
ಚಿಂಚಣಿ ಮಠದ ಉತ್ತರಾಧಿಕಾರಿ ಶಿವಪ್ರಸಾದ ದೇವರು ದೀಪ ಹಚ್ಚುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು. ಇದೇ ವೇಳೆ ಸಿದ್ದೇಶ್ವರ ದೇವರ ಪಲ್ಲಕ್ಕಿ ಉತ್ಸವ ವೈಭವದಿಂದ ಜರುಗಿತು. ಸುತ್ತಮುತ್ತಲಿನ ಹಳ್ಳಿಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.

