ಅನಾರೋಗ್ಯದಿಂದ ನಿಧನರಾದ ರಾಮನಗರದ ಯೋಧನ ಅಂತ್ಯಕ್ರಿಯೆ ಅತ್ಯಂತ ಶೋಕಾಕುಲ ವಾತಾವರಣದಲ್ಲಿ ನಡೆಯಿತು.

ಖಾನಾಪೂರ ತಾಲೂಕಿನ ರಾಮನಗರದ ಯೋಧ ಶಶಿಕಾಂತ ಕೆ. ಬಾವಾ (44) ಮಂಗಳವಾರ ರಾತ್ರಿ ಹೊಟ್ಟೆ ನೋವಿನಿಂದ ಪಟಾನಕೋಟ್ ಆಸ್ಪತ್ರೆಯಲ್ಲಿ ನಿಧನರಾದರು. ಯೋಧ ಶಶಿಕಾಂತ 281 ಶಿಲ್ಡ್ ರೆಜಮೆಂಟಲ್ ಅಟ್ಲರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರ ಆಕಸ್ಮಿಕ ನಿಧನದಿಂದ ರಾಮನಗರದಲ್ಲಿ ಶೋಕ ವ್ಯಕ್ತವಾಗುತ್ತಿದೆ. ಇಂದು ಗುರುವಾರ ಅವರ ಪಾರ್ಥಿವ ಶರೀರವನ್ನು ಸಾಂಬ್ರಾ ವಿಮಾನ ನಿಲ್ದಾಣದ ಮೂಲಕ ರಾಮನಗರಕ್ಕೆ ಕರೆದೊಯ್ಯಲಾಯಿತು. ನಂತರ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರೆವೇರಿಸಲಾಯಿತು.
ಈ ವೇಳೆ ಮಾತನಾಡಿದ ಪ್ರಮುಖರು ಯೋಧ ಶಶಿಕಾಂತ ಇದೇ ಡಿಸೆಂಬರ್ ತಿಂಗಳಿನಲ್ಲಿ ಸೇವಾ ನಿವೃತ್ತಿ ಹೊಂದಿ ತಮ್ಮ ಕುಟುಂಬದೊಂದಿಗೆ ಜೀವನ ನಡೆಸುವ ಭಾವನೆಯಲ್ಲಿದ್ದರು. ಆದರೇ, ವಿಧಿ ಆಟವಾಡಿರುವುದು ದುಃಖದ ಸಂಗತಿ. ಗ್ರಾಮದ ಹೆಮ್ಮೆಯ ಪುತ್ರ ಮೆರವಣಿಗೆ ಮೂಲಕ ಬರುತ್ತಾನೆಂದು ತಿಳಿದುಕೊಂಡಿದ್ದೇವು. ಆದರೇ, ಈಗ ಬೇರೆಯೇ ನಡೆದಿದ್ದು, ಭಗವಂತ ಮೃತ ಯೋಧನ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದರು.
ಇನ್ನು ಯೋಧನ ಅಕಾಲಿಕ ಸಾವು ಗ್ರಾಮದ ಮೇಲೆ ಮತ್ತು ಅವರ ಕುಟುಂಬದ ಮೇಲೆ ದುಃಖವನ್ನು ತಂದಿದೆ. ದೇಶಕ್ಕಾಗಿ ಸೇವೆ ಸಲ್ಲಿಸಿದ ಯೋಧರೊಂದಿಗೆ ಸಂಪೂರ್ಣ ಗ್ರಾಮಸ್ಥರಿದ್ದಾರೆ. ದೇಶಕ್ಕಾಗಿ ತ್ಯಾಗ ಮಾಡುವ ಸೈನಿಕರಿಗೆ ಸರ್ಕಾರವು ಸಹಾಯ ಸವಲತ್ತುಗಳನ್ನು ನೀಡಬೇಕೆಂದು ಇನ್ನೋರ್ವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜೋಯಿಡಾ ತಹಶೀಲ್ದಾರರಾದ ಮಂಜುನಾಥ ಮನ್ನೋಳ್ಳಿ, ಮಾಜಿ ಶಾಸಕ ಸುನೀಲ್ ಹೆಗಡೆ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.
