Dharwad

ನಿರುದ್ಯೋಗ ನಿವಾರಿಸುವಲ್ಲಿ ಪೆಂಡಾಲ ಮಾಲೀಕರ ಪಾತ್ರ ದೊಡ್ಡದು ನಿವೇಶನ ಕೊಡಿಸಲು ಸಹಕಾರ – ಸಚಿವ ಶಿವಾನಂದ

Share

ವಿಜಯಪುರ : ಶಾಮೀಯಾನಾ, ಪೆಂಡಾಲ್, ಲೈಟಿಂಗ್, ಡೆಕೋರೇಶನ್ ಮಾಲೀಕರು ಸಮಾಜದಲ್ಲಿ ನಿರುದ್ಯೋಗ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಸರ್ಕಾರದ ಮೇಲೆ ಭಾರ ಕಡಿಮೆ ಆಗಿದೆ ಎಂದು ಜವಳಿ, ಕೃಷಿ ಮಾರುಕಟ್ಟೆ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ನಗರದ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಿಂಭಾಗದ ಆಲಕುಂಟೆ ಪ್ರದೇಶದಲ್ಲಿ ಹಮ್ಮಿಕೊಂಡಿರುವ ಉತ್ತರ ಕರ್ನಾಟಕ ಶಾಮಿಯಾನಾ ಸಪ್ಲಾಯರ್, ಲೈಟಿಂಗ್, ಧ್ವನಿವರ್ಧಕ ಹಾಗೂ ಡೆಕೋರೇಶನ್ ಮಾಲೀಕರ ಸಂಘ ಹಮ್ಮಿಕೊಂಡಿದ್ದ ವಿಜಯಪುರ ಉತ್ಸವದ ವಸ್ತು ಪ್ರದರ್ಶನದಲ್ಲಿ ಅದೃಷ್ಟದ ಬಹುಮಾನ ವಿತರಿಸಿ ಮಾತನಾಡಿದರು.

ದೇಶದಲ್ಲಿರು ಜನಸಂಖ್ಯೆಯಲ್ಲಿ ಸರ್ಕಾರವೇ ಎಲ್ಲರಿಗೂ ಉದ್ಯೋಗ ನೀಡಲು ಸಾಧ್ಯವಿಲ್ಲ. ದೇಶದಲ್ಲಿ ಶೇ.93 ಕ್ಕಿಂತ ಅಧಿಕ ಜನರಿಗೆ ಉದ್ಯೋಗವಿಲ್ಲ. ಆದರೆ ಭಾರತೀಯ ಕೃಷಿರಂಗ ಶೇ.70 ರಷ್ಟು ಜನರಿಗೆ ಉದ್ಯೋಗ ಕಲ್ಪಿಸಿದೆ. ಉದ್ಯೋಗ ನೀಡಿ ನಿರುದ್ಯೋಗ ಸಮಸ್ಯೆ ನೀಗಿರುವ ರೈತ, ದೇಶದ 140 ಕೋಟಿ ಜನತ ಹಸಿವನ್ನೂ ನೀಗಿದ್ದು, ಭಾರತ ಆಹಾರ ಸ್ವಾವಲಂಬನೆ ಪಡೆಯುವಲ್ಲಿ ಸಹಕಾರಿ ಆಗಿದೆ ಎಂದು ವಿಶ್ಲೇಷಿಸಿದರು.

ಅದೇರೀತಿ ಪೆಂಡಾಲ್, ಶಾಮೀಯಾನಾ ಮಾಲೀಕರು ವಿಶೇಷವಾಗಿ ಕರ್ನಾಟಕ ರಾಜ್ಯದಲ್ಲಿ 2 ಲಕ್ಷ ಜನರಿಗೆ ಉದ್ಯೋಗ ನೀಡಿದ್ದಾರೆ. ಇದು ಸರ್ಕಾರದ ಮೇಲೆ ಉದ್ಯೋಗ ನೀಡುವ ಒತ್ತಡ ಕಡಿಮೆ ಮಾಡಿದೆ ಎಂದರು.

ಪೆಂಡಾಲ್ ವ್ಯವಸ್ಥೆಯಿಂದ ಮಳೆ, ಛಳಿ, ಬಿಸಿಲು ಏನೆ ವೈಪರೀತ್ಯಗಳಿದ್ದರೂ ಎಂಥದ್ದೇ ಬೃಹತ್ ಕಾರ್ಡ್ ಇದ್ದರೂ ನಿರಾಳವಾಗಿ ಮಾಡಲು ಸಾಧ್ಯವಾಗಿದೆ. ಈಚೆಗೆ ಹೊಸಪೇಟೆಯಲ್ಲಿ ಜರುಗಿದ ಸರ್ಕಾರದ ಬೃಹತ್ ಕಾರ್ಯಕ್ರಮ ವಿಪರೀತ ಮಳೆಯ ಮಧ್ಯೆಯೂ 6-7 ಲಕ್ಷ ಜನರು ನಿರಾಳವಾಗಿ ಕಾರ್ಯಕ್ರಮ ವೀಕ್ಷಿಸಲು ಸಾಧ್ಯವಾಗಿದ್ದೇ ನಿಮ್ಮ ಪರಿಶ್ರಮದಿಂದ ಎಂದರು.

ಯಾವುದೇ ಕಾರ್ಯಕ್ರಮದಲ್ಲಿ ಧ್ವನಿವರ್ಧಕ ಬಳಸಿ ಮಾತನಾಡಿದರೆ ಲಕ್ಷ, ಕೋಟಿ ಜನರಿಗೆ ನಮ್ಮ ಮಾತು ಕೇಳುವಂತೆ ಸಾಧ್ವವಾಗಿಸಿದೆ. ಜಗಮಗಿಸುವ ಬೆಳಕು ನೀಡಿ, ಕಾರ್ಯಕ್ರಮದ ವೇದಿಕೆಯನ್ನು ಜನಾಕರ್ಷಣೆ ಮಾಡುವಲ್ಲಿ ನಿಮ್ಮ ಪಾತ್ರ ದೊಡ್ಡದಿದೆ ಎಂದು ಶ್ಲಾಘಿಸಿದರು. ಆಧುನಿಕತೆಗೆ ತಕ್ಕಂತೆ ಪೆಂಡಾಲ್, ಶಾಮೀಯಾನಾ, ಲೈಟಿಂಗ್, ಮೈಕ್ ಮಾಲೀಕರು ಕೂಡ ತಾಂತ್ರಿಕವಾಗಿ ಬದಲಾವಣೆಗಳನ್ನು ಅಳವಡಿಸಿಕೊಳ್ಳುತ್ತಾ ಬರುತ್ತಿದ್ದೀರಿ. ಇದರಿಂದಾಗಿ ಭವಿಷ್ಯದಲ್ಲಿ ನಿಮ್ಮ ಮೇಲೆ ಇನ್ನೂ ಹೆಚ್ಚಿನ ನಿರೀಕ್ಷೆ ಇದೆ ಎಂದರು.

ಪೆಂಡಾಲ್ ಮಾಲೀಕರು ಸಂಘಟನೆಗಳು ಒಗ್ಗೂಡಿ ಕೆಲಸ ಮಾಡಬೇಕು. ಡಾ.ಅಂಬೇಡ್ಕರ್ ಅವರು ಹೇಳಿದ ಶಿಕ್ಷಣ, ಸಂಘಟನೆ, ಹೋರಾಟ ನಿಮ್ಮ ಮೂಲ ಮಂತ್ರವಾಗಲಿ ಎಂದು ಕಿವಿಮಾತು ಹೇಳಿದರು.

ನೀವು ನಿಮ್ಮ ಸಾಮಗ್ರಿಗಳನ್ನು ದಾಸ್ತಾನು ಮಾಡಿಕೊಳ್ಳಲು ವಿಸ್ತಾರವಾದ ಗೋದಾಮು ಬೇಕಿದೆ. ಇದಕ್ಕಾಗಿ ನಿಮ್ಮ ಸಂಘಟನೆಯಿಂದ ಪತ್ರ ಬರೆದರೆ ಕಡಿಮೆ ದರದಲ್ಲಿ ಬಿಡಿಎ ನಿವೇಶನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಒಂದೊಮ್ಮೆ ನೀವೇ ಜಮೀನು ಖರೀದಿಸಿ, ಕೃಷಿಯೇತರ ಭೂಮಿ ಪರಿವರ್ತನೆಗೆ ಮುಂದಾದರೂ ಅದಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಸಂಘಟನೆಯ ಪ್ರಮುಖರಾದ ಅಪ್ಪಣ್ಣ, ಅಮರೇಶ ಹಿರೇಮಠ, ಶಿವಾನಂದ ಮಾನಕರ, ಪ್ರಕಾಶ, ಚನ್ನಬಸಪ್ಪ ಗಸ್ತಿ, ಲಕ್ಷ್ಮಣ ದಿಗ್ಗಾವಿ, ಪ್ರಕಾಶ, ಬಷೀರ ಅಹ್ಮದ್ ಬಾಂಗಿ, ದ್ಯಾವಣ್ಣ ಬಜಂತ್ರಿ, ಅಮರಸಿಂಗ್ ರಜಪೂತ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:

error: Content is protected !!