ನಾಯಕತ್ವ ಬದಲಾವಣೆ ಹಿನ್ನೆಲೆ ಅಭಿಪ್ರಾಯ ಸಂಗ್ರಹಿಸಲು ರಾಜ್ಯಕ್ಕೆ ಆಗಮಿಸಿದ್ದಾರೆಂಬ ಆರೋಪವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಪಕ್ಷದ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ತಳ್ಳಿಹಾಕಿದ್ದಾರೆ. ಮಂಗಳವಾರ ಬೆಂಗಳೂರಿನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಅವರು ಮಾತನಾಡಿದರು.
ಶಾಸಕರು ಮತ್ತು ಸಂಸದರ ಸ್ವಂತ ಕ್ಷೇತ್ರಗಳಲ್ಲಿ ಆಗಿರುವ ಕೆಲಸಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಲು ರಾಜ್ಯಕ್ಕೆ ಆಗಮಿಸಿದ್ದೇನೆ. ‘ಕೆಲವರು ನಾಯಕತ್ವ ಬದಲಾವಣೆಯ ಬಗ್ಗೆ ಶಾಸಕರು ಮತ್ತು ಸಂಸದರ ಅಭಿಪ್ರಾಯ ಸಂಗ್ರಹಿಸುತ್ತಿದ್ದೀರಾ ಎಂದು ನನ್ನನ್ನು ಕೇಳಿದರು. ನಿನ್ನೆಯೂ ನಾನು ನೀಡಿದ್ದ ಉತ್ತರವನ್ನೇ ಇಂದು ಮತ್ತೆ ಹೇಳುತ್ತಿದ್ದೇನೆ. ಒಂದೇ ಪದದಲ್ಲಿ ಹೇಳುವುದಾದರೆ ಸ್ಪಷ್ಟವಾಗಿ ‘ಇಲ್ಲ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಕೆಪಿಸಿಸಿ ಅಧ್ಯಕ್ಷ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಜೊತೆಗಿದ್ದ ಸುರ್ಜೇವಾಲಾ, ‘ಪಕ್ಷದ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಮತ್ತು ಲೋಕಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳೊಂದಿಗೆ ಸಭೆ ನಡೆಸುವುದಾಗಿ ಹೇಳಿದರು.
‘ನಾವು ಅವರನ್ನು ಶಾಸಕರನ್ನು ಕೇಳುತ್ತಿದ್ದೇವೆ, ಅವರಿಗೆ ಏನಾದರೂ ತೊಂದರೆ ಅಥವಾ ಆಕಾಂಕ್ಷೆ ಇದ್ದರೆ ಹೇಳಬಹುದು. ಪ್ರತಿಯೊಬ್ಬ ಶಾಸಕರಿಗೂ ಕೆಲವು ಆಕಾಂಕ್ಷೆಗಳು ಅಥವಾ ಕ್ಷೇತ್ರದಲ್ಲಿ ಇನ್ನೂ ಕೆಲವು ಕೆಲಸಗಳು ಇರುತ್ತವೆ. ಕರ್ನಾಟಕದಲ್ಲಿ ಅಭಿವೃದ್ಧಿಗೆ ಸರ್ಕಾರದ ಬಳಿ ಹಣವಿಲ್ಲ ಎನ್ನುವುದು ಕರ್ನಾಟಕದಲ್ಲಿ ಬಿಜೆಪಿ ಹರಡಿದ ಸುಳ್ಳು. ಅವರು ಖಾತರಿಗಳನ್ನು ಸ್ಥಗಿತಗೊಳಿಸಬೇಕೆಂದು ಬಯಸುತ್ತಾರೆ. ಆರ್. ಅಶೋಕ ಅವರಿಂದ ವಿಜಯೇಂದ್ರವರೆಗಿನ ಬಿಜೆಪಿ ನಾಯಕರು ಐದು ಖಾತರಿಗಳನ್ನು ನಿಲ್ಲಿಸಬೇಕೆಂದು ಬಯಸುತ್ತಿದ್ದಾರೆ ಎಂದು ನಾನು ಪುನರುಚ್ಚರಿಸುತ್ತೇನೆ. ಕನ್ನಡಿಗರ ಖಾತೆಗಳಿಗೆ ಪಾರದರ್ಶಕ ರೀತಿಯಲ್ಲಿ 58,000 ಕೋಟಿ ರೂ. ಹೋಗಬಾರದು ಎಂದು ಅವರು ಬಯಸುತ್ತಾರೆ’ ಎಂದು ಅವರು ಆರೋಪಿಸಿದರು.ತಮ್ಮ ಕ್ಷೇತ್ರಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂಬ ಕೆಲವು ಕಾಂಗ್ರೆಸ್ ಶಾಸಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕ ಸರ್ಕಾರದ ಬಳಿ ಸಾಕಷ್ಟು ಹಣವಿದೆ ಎಂದು ಹೇಳಿದರು.
ಸರ್ಕಾರದ ವಿರುದ್ಧ ಬಹಿರಂಗ ಹೇಳಿಕೆ ನೀಡುವ ಶಾಸಕರ ಬಗ್ಗೆ ಮಾತನಾಡಿದ ಅವರು, ‘ಪಕ್ಷದಲ್ಲಿ ಏನೇ ಆದರೂ ಅಧು ಪಕ್ಷದೊಳಗೆ ಉಳಿಯಬೇಕು. ಶಾಸಕರಿಗೂ ನಾನು ಸಲಹೆ ನೀಡಿದ್ದೇನೆ. ಅವರಿಗೆ ಏನಾದರೂ ಸಮಸ್ಯೆ ಇದ್ದರೆ, ಆ ಸಮಸ್ಯೆಯನ್ನು ಬಹಿರಂಗವಾಗಿ ಹೇಳುವ ಬದಲು ಸಂಬಂಧಪಟ್ಟವರೊಂದಿಗೆ ಚರ್ಚಿಸಲು ಸೂಚಿಸಿದ್ದೇನೆ. ಕೆಪಿಸಿಸಿಯಲ್ಲಿ ಶಿವಕುಮಾರ್ ಇದ್ದಾರೆ ಮತ್ತು ಸರ್ಕಾರದಲ್ಲಿ ಸಿದ್ದರಾಮಯ್ಯ ಇದ್ದಾರೆ ಎಂದರು.