ಅಥಣಿ: ತನಿಷ್ಕ ಬಾರ್ ಬಳಿ ಅಥಣಿ ಜಮಖಂಡಿ ಮಾರ್ಗದಲ್ಲಿ ಘೋರ ರಸ್ತೆ ಅಪಘಾತದಲ್ಲಿ 10 ವರ್ಷದ ಬಾಲಕನು ಸ್ಥಳದಲ್ಲೇ ಸಾವಿಗೀಡಾದ ದುರ್ಘಟನೆ ನಡೆದಿದೆ. ಸ್ಥಳೀಯರ ಪ್ರಕಾರ, ರಸ್ತೆ ಪಕ್ಕದಿಂದ ನಡೆದುಕೊಂಡು ಹೋಗುತ್ತಿದ್ದ ಬಾಲಕನ ಮೇಲೆ ವೇಗವಾಗಿ ಬಂದ ಕಾರು ಹಾದು ಹೋಗಿದ್ದು, ಬಾಲಕನಿಗೆ ತೀವ್ರ ಗಾಯಗಳಾಗಿ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾನೆ.
ಅಪಘಾತದ ನಂತರ ಕಾರು ಚಾಲಕ ತಕ್ಷಣವೇ ತಾನು ಮಾಡಿದ ಅಪರಾಧವನ್ನು ಲೆಕ್ಕಿಸದೇ, ಕನಿಕರವಿಲ್ಲದೆ ತಿರುಗಿ ನೋಡದೇ ಪರಾರಿಯಾಗಿದ್ದಾನೆ. ಈ ಘಟನೆಯು ಸ್ಥಳೀಯರಲ್ಲಿ ಆಕ್ರೋಶ ಎಬ್ಬಿಸಿದೆ.
ಸ್ಥಳಕ್ಕೆ ಅಥಣಿ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಸಂಬಂಧ ತನಿಖೆ ಆರಂಭಿಸಲಾಗಿದೆ. ಬಾಲಕನ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕಾರು ಚಾಲಕನ ಪತ್ತೆಗಾಗಿ ಪೋಲೀಸರು ಸಿಸಿಟಿವಿ ಫುಟೇಜ್ ವೀಕ್ಷಿಸುತ್ತಿದ್ದಾರೆ.
ಈ ಘಟನೆ ಸಂಬಂಧ ದೂರು ದಾಖಲಿಸಿಕೊಂಡ ಅಥಣಿ ಪೊಲೀಸರು ನಾಪತ್ತೆಯಾದ ಕಾರು ಮತ್ತು ಚಾಲಕನ ತನಿಖೆಗೆ ತೀವ್ರ ಶೋಧ ಆರಂಭಿಸಿದ್ದಾರೆ.