ಕಾರ್ಮಿಕ ಸಚಿವ ಸಚಿವ ಸಂತೋಷ ಲಾಡ್ ಕ್ಷೇತ್ರದಲ್ಲಿ ದಲಿತರಿಗೆ ಬಹಿಷ್ಕಾರ… ಕಲಘಟಗಿ ತಾ.ಸುತಗಟ್ಟಿ ಗ್ರಾಮದಲ್ಲಿ ದಲಿತರಿಗೆ ಬಹಿಷ್ಕಾರ…. ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಇಲಾಖೆಯ ಸಚಿವ ಸಂತೋಷ ಲಾಡ್ ಅವರ, ತವರು ಕ್ಷೇತ್ರದಲ್ಲೇ ದಲಿತರಿಗೆ ಸವರ್ಣೀಯರು ಬಹಿಷ್ಕಾರ ಹಾಕಿರುವ ಗಂಭೀರ ಆರೋಪ ಕೇಳಿ ಬಂದಿದೆ.
ಕಲಘಟಗಿ ತಾಲೂಕಿನ ಸುತಗಟ್ಟಿ ಗ್ರಾಮದ 9 ದಲಿತ ಕುಟುಂಬಗಳಿಗೆ ಅದೇ ಗ್ರಾಮದ ಸವರ್ಣೀಯರು ಬಹಿಷ್ಕಾರ ಹಾಕಿದ್ದಾರೆ. ಈ ದಲಿತ ಕುಟುಂಬದವರು ಅದೇ ಗ್ರಾಮದ ಗುಡ್ಡದ ಜಾಗವನ್ನು ಸಾಗುವಳಿ ಮಾಡಿ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ಕಳೆದ 20-25 ವರ್ಷದಿಂದ ಸಾಗುವಳಿ ಮಾಡುತ್ತಿದ್ದರೂ ಆ ಗ್ರಾಮದ ಸವರ್ಣೀಯರು ಆ ಜಾಗ ಸಾಗುವಳಿ ಮಾಡುವುದನ್ನು ಬಿಡಬೇಕು. ಆ ಜಾಗ ಊರಿನ ದನ, ಕರುಗಳಿಗೆ ಮೇಯಲು ಬೇಕು ಎಂದು ಆಗ್ರಹಿಸುತ್ತಿದ್ದರು. ಇದರಿಂದ ದಲಿತರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇವರು ಹೈಕೋರ್ಟ್ಗೆ ಹೋಗಿದ್ದರಿಂದ ಸವರ್ಣೀಯರು ಆ ಕುಟುಂಬಸ್ಥರಿಗೆ ಗ್ರಾಮದಲ್ಲಿ ಬಹಿಷ್ಕಾರ ಹಾಕಿದ್ದಾರೆ. ಊರಿನಲ್ಲಿ ಯಾರೂ ಅವರೊಂದಿಗೆ ಮಾತನಾಡಬಾರದು, ಅಂಗಡಿಯವರು ಅವರಿಗೆ ಏನೂ ಕೊಡಬಾರದು ಒಂದು ವೇಳೆ ಅವರೊಂದಿಗೆ ಯಾರಾದರೂ ಮಾತನಾಡಿದಲ್ಲಿ, ಅವರಿಗೆ ದಂಡ ಹಾಕುವ ಬೆದರಿಕೆಯನ್ನು ಸವರ್ಣೀಯರು ಹಾಕಿದ್ದಾರೆ ಎಂಬ ಆರೋಪವನ್ನು ಬಹಿಷ್ಕಾರಕ್ಕೊಳಗಾದ ಕುಟುಂಬದವರು ಹೇಳುತ್ತಾರೆ. ಇವರು ಊರಿಗೆ ಹೋದರೆ ಒಳ ಬರದಂತೆ ಹಗ್ಗ ಹಾಕುತ್ತಾರಂತೆ. ಗುಡ್ಡದ ಜಾಗ ಬಗರಹುಕುಂ ಸಾಗುವಳಿ ಮಾಡುವುದನ್ನು ಬಿಟ್ಟು ನಮ್ಮ ಹೊಲದ ಕೂಲಿ ಕೆಲಸಕ್ಕೆ ಬನ್ನಿ ನಾವು ವೇತನ ಕೊಡುತ್ತೇವೆ. ಇಲ್ಲದೇ ಹೋದರೆ ಊರಲ್ಲಿ ಪ್ರವೇಶ ಕೊಡುವುದಿಲ್ಲ ಎಂಬ ಬೆದರಿಕೆಯನ್ನು ಸವರ್ಣೀಯರು ಹಾಕಿದ್ದಾರಂತೆ. ಸದ್ಯ ಈ ವಿಷಯವನ್ನು ಆ ದಲಿತ ಕುಟುಂಬಸ್ಥರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.