ಬೆಂಗಳೂರಿನಲ್ಲಿ ಆರ್.ಸಿ.ಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತಕ್ಕೆ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿ ರಾಜೀನಾಮೆ ಕೇಳುತ್ತಿರುವ ಬಿಜೆಪಿಗರು ಕುಂಭಮೇಳದಲ್ಲಿ ಜನರು ಸಾವಪ್ಪಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೊದಲು ಪಿಎಂ ಹಾಗೂ ಗೃಹ ಸಚಿವರು ಮತ್ತು ಯುಪಿ ಸಿಎಂ ರಾಜೀನಾಮೆ ಕೇಳಲಿ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸವಾಲು ಹಾಕಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಬೆಂಗಳೂರಿನ ಕಾಲ್ತುಳಿತ ಪ್ರಕರಣದಲ್ಲಿ 11 ಜನ ಸಾವನ್ನಪ್ಪಿದ್ದು, ಆರ್.ಸಿ.ಬಿ ಟೀಂ ನಡೆಸುವವರು ಮತ್ತು ಸ್ಟೇಡಿಯಂನವರೇ ಇದಕ್ಕೆ ನೇರ ಹೊಣೆಗಾರರು. ಆಯೋಜಕರಿಂದ ವಿಜಯೋತ್ಸವದ ವೇಳೆ ಲೋಪವೆಸಗಿದೆ. ಆದರೇ, ಸರ್ಕಾರವೇ ನೇರ ಹೊಣೆ ಎನ್ನಲು ಆಗುವುದಿಲ್ಲ. ಸರ್ಕಾರವಾಗಲಿ ಸಿಎಂ, ಡಿಸಿಎಂ ಈ ಘಟನೆಗೆ ಹೊಣೆಯಾದರೇ, ಕುಂಭಮೇಳದಲ್ಲಿಯೂ ಹಲವರು ಸಾವನ್ನಪ್ಪಿದ್ದಾರೆ. ಪೆಹಲ್’ಗಾಮ್’ನಲ್ಲಿ ಪ್ರವಾಸಿಗರು, ಯುದ್ಧದಲ್ಲಿ 40 ಸೈನಿಕರು ಸಾವನ್ನಪ್ಪಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರ ಹೊಣೆಯಲ್ಲವೇ? ಇದಕ್ಕೆ ಪಿಎಂ, ಕೇಂದ್ರ ಗೃಹ ಸಚಿವರು ಮತ್ತು ಯುಪಿ ಸಿಎಂ ರಾಜೀನಾಮೇ ಕೇಳಲಿ, ನಮ್ಮನ್ನು ಕೇಳಲಿ ಎಂದು ಬಿಜೆಪಿಗರಿಗೆ ತಿರುಗೇಟು ನೀಡಿದರು.

ಇನ್ನು ಸ್ಟೇಡಿಯಂ ಮತ್ತು ಆಯೋಜಕರು ವಿಜಯೋತ್ಸವದಲ್ಲಿ ಎಲ್ಲರಿಗೂ ಉಚಿತ ಪ್ರವೇಶ ನೀಡಿದ್ದಾರೆ. ರಾಷ್ಟ್ರಮಟ್ಟದಲ್ಲಿ ಸರ್ಕಾರಕ್ಕೆ ಕೆಟ್ಟ ಹೆಸರು ಬಂದಿದೆ. ಆದರೇ, ಇದರಲ್ಲಿ ಸರ್ಕಾರದ ತಪ್ಪಿಲ್ಲ. ಇಲಾಖೆಗಳ ವೈಫಲ್ಯವೇ ಕಾರಣವಾಗಿದೆ. ಸಂಬಂಧಿಸಿದ ಪೊಲೀಸರನ್ನು ಸರ್ಕಾರ ಈಗಾಗಲೇ ಅಮಾನತ್ತು ಮಾಡಿದೆ ಎಂದರು.