ಧಾರವಾಡ: ಅಹ್ಮದಾಬಾದ್ನಲ್ಲಿ ನಡೆದ ವಿಮಾನ ದುರಂತದ ವೇಳೆ ಭಗವದ್ಗೀತೆ ಸುಟ್ಟಿಲ್ಲ. ಅದನ್ನು ನೋಡಿದ ವೈದಿಕರು ದೇವರು ಇದ್ದಾನೆ ಎಂದು ಹರಿಬಿಡುತ್ತಿದ್ದಾರೆ. ಅದನ್ನು ನಾವೂ ಶೇರ್ ಮಾಡುತ್ತಿದ್ದೇವೆ. ಭಗವದ್ಗೀತೆ ಸುಟ್ಟಿ ಎನ್ನುವುದಾದರೆ ಅದೇ ದುರಂತದಲ್ಲಿ ಬದುಕಿ ಬಂದ ರಮೇಶ್ ಎಂಬ ವ್ಯಕ್ತಿ ಶ್ರೀಕೃಷ್ಣಾ ಆದ್ನಾ ಹಾಗಾದ್ರೆ? ಎಂದು ಹೊಸದುರ್ಗ ಕುಂಚಟಗ ಮಠದ ಶಾಂತವೀರ ಸ್ವಾಮೀಜಿ ಪ್ರಶ್ನಿಸಿದ್ದಾರೆ.
ಭಾನುವಾರ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಬುದ್ಧ, ಬಸವ, ಅಂಬೇಡ್ಕರ್ ಕುರಿತಾದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಆ ವಿಮಾನ ದುರಂತದಲ್ಲಿ ಬದುಕಿ ಬಂದ ರಮೇಶ್ನನ್ನು ದೇವರು ಎಂದು ಪರಿಗಣಿಸ್ತಾರಾ? ಭಗವದ್ಗೀತೆ ಬಗ್ಗೆ ನಮಗೂ ಗೌರವ ಇದೆ. ಆ ಘಟನೆಯಲ್ಲಿ ಭಗವದ್ಗೀತೆ ಸುಟ್ಟಿಲ್ಲ. ಆದರೆ, ಜನರೆಲ್ಲ ಸತ್ತರು. ಆ ಭಗವದ್ಗೀತೆ ಸುಡದ ಕಾರಣಕ್ಕೆ ದೇವರು ಇದ್ದಾನೆ ಎಂದು ವೈದಿಕರು ವಿಚಾರ ಹರಿಬಿಟ್ಟಿದ್ದಾರೆ ಎಂದರು. ಜತೆಗೆ ಆ ವಿಮಾನದಲ್ಲಿ ಒಂದು ಬ್ಲ್ಯಾಕ್ ಬಾಕ್ಸ್ ಸಹ ಇತ್ತು. ಅದನ್ನು ತಿಂಗಳಾನುಗಟ್ಟಲೇ ನೀರಲ್ಲಿ ಇಟ್ಟರೂ ಕೊತ ಕೊತ ಸುಡುವ ಬೆಂಕಿಯಲ್ಲಿ ಹಾಕಿದರೂ ಅದಕ್ಕೆ ಏನೂ ಆಗುವುದಿಲ್ಲ. ಹಾಗಾದರೆ ಇಲ್ಲಿ ಭಗವದ್ಗೀತೆ ಶ್ರೇಷ್ಠವೇ ಅಥವಾ ಬ್ಲ್ಯಾಕ್ ಬಾಕ್ಸ್ ಶ್ರೇಷ್ಠವೇ? ಎಂದು ಸ್ವಾಮೀಜಿ ಪ್ರಶ್ನಿಸಿದರು. ಈ ದುರ್ಘಟನೆಯಲ್ಲಿ ಓರ್ವ ಮನುಷ್ಯ ಸಹ ಬದುಕಿದ್ದಾನೆ. ವಿಮಾನ ಬ್ರೇಕ್ ಆಯ್ತು ನಾನು ಟೆರೇಸ್ ಬಿದ್ದೆ ಅಂತ ಆತ ಹೇಳಿದ್ದಾನೆ. ಬದುಕಿದ ಆತ ಈಗ ಶ್ರೀಕೃಷ್ಣ ಆದ್ನಾ? ನಾಳೆಯಿಂದ ಹೋಗಿ ರಮೇಶ ದೇವರೇ ಎಂದು ಸುದ್ದಿ ಹಬ್ಬಿಸುತ್ತಾರೆ. ಅವನಿಗೂ ಹೋಗಿ ಕಾಲಿಗೆ ಬಿದ್ದು ಕಾಣಿಕೆ ಕೊಡುವ ಜನ ನಮ್ಮ ಸಮಾಜದಲ್ಲಿದ್ದಾರೆ. ಇಂತಹ ಮೌಢ್ಯತೆ, ಕಂದಾಚಾರ, ಜಾತಿಯಿಂದ ಹೊರಬರುವ ಕೆಲಸ ಮಾಡಬೇಕಿದೆ. ಆಗ ಮಾತ್ರ ಸೌಹಾರ್ಧ, ಸಹಬಾಳ್ವೆ, ಸಮ ಸಮಾಜ ನಿರ್ಮಾಣ ಸಾಧ್ಯ ಎಂದರು.