Chikkodi

ಕೊಠಡಿ ಬೇಡಿದ‌ ಮುಖ್ಯಶಿಕ್ಷಕನಿಗೆ ಶಿಕ್ಷೆ ಕೊಟ್ಟ ಇಲಾಖೆ,ವಿದ್ಯಾರ್ಥಿಗಳ ಆಕ್ರೋಶ

Share

ಸರ್ಕಾರಿ ಶಾಲಾ ಕೊಠಡಿಗಾಗಿ ಒತ್ತಾಯಿಸಿ ಪ್ರತಿಭಟನೆ ಮಾಡಿದ್ದ ಮುಖ್ಯ ಶಿಕ್ಷಕ ವೀರಣ್ಣ ಮಡಿವಾಳರ ಅವರನ್ನು ಶಿಕ್ಷಣ ಇಲಾಖೆ ಅಮಾನತ್ತು ಮಾಡಿ ಆದೇಶ ಮಾಡಿತ್ತು. ಆದ್ರೆ ಸದ್ಯ ಅದೇ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಹಾಗೂ ನಿಡಗುಂದಿ ಗ್ರಾಮಸ್ಥರು ಸರ್ಕಾರದ ವಿರುದ್ಧ ಹಾಗೂ ಶಿಕ್ಷಣ ಇಲಾಖೆ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದ ಮುಖ್ಯ ಶಿಕ್ಷಕ ವೀರಣ್ಣ ಮಡಿವಾಳರ ಅವರನ್ನು ಶಿಕ್ಷಣ ಇಲಾಖೆ ಅಮಾನತ್ತು ಮಾಡಿದೆ. ನಿಡಗುಂದಿ ಗ್ರಾಮದ ಅಂಬೇಡ್ಕ‌ರ್ ಕಾಲೋನಿಯ ಸರ್ಕಾರಿ ಶಾಲೆಯಲ್ಲಿ 146 ಮಕ್ಕಳಿದ್ದು, ಇರೋದು ಮೂರು ಕೊಠಡಿ ಮಾತ್ರ. ಹೆಚ್ಚುವರಿ ಕೊಠಡಿಗಳು ಮಂಜೂರಾಗಿ ಮೂರು ವರ್ಷ ಕಳೆದಿದೆ. ಆದರೂ ಅಧಿಕಾರಿಗಳು ಮಾತ್ರ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿಲ್ಲ. ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಈ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕ ವೀರಣ್ಣ ಮಡಿವಾಳರ ಸಾಕಷ್ಟು ಬಾರಿ ಮನವಿ ಮಾಡಿದ್ರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಹೀಗಾಗಿ ಕೊನೆಯ ಅಸ್ತ್ರವಾಗಿ ವೀರಣ್ಣ ಮಡಿವಾಳರ ಅವರು ಗಾಂಧೀಜಿ ಮತ್ತು ಅಂಬೇಡ್ಕ‌ರ್ ಅವರ ಫೋಟೋ ಹಿಡಿದು ಮೌನ ಹೋರಾಟಕ್ಕೆ ಇಳಿದಿದ್ದರು.

ಇನ್ನು ಪ್ರತಿಭಟನೆ ಮಾಡಿದ್ದೇ ತಡ, ತರಾತುರಿಯಲ್ಲಿ ಮುಖ್ಯ ಶಿಕ್ಷಕ ವೀರಣ್ಣ ಮಡಿವಾಳರ ಅವರನ್ನು ಬಿಇಒ ಬಸವರಾಜ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಇನ್ನೂ ಶಿಕ್ಷಕ ವೀರಣ್ಣ ಮಡಿವಾಳರ ಅಮಾನತ್ತು ಮಾಡಿದ್ದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಅಮಾನತ್ತು ಖಂಡಿಸಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಅಮಾನತ್ತು ವಾಪಸ್ಸು ಪಡೆಯುವ ವರೆಗೆ ಶಾಲೆಯ ಒಳಗಡೆ ಹೋಗುವುದಿಲ್ಲ. ಬಿಸಿಯೂಟ ಸೇವಿಸುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಗೆ ಪೋಷಕರು ಹಾಗೂ ಗ್ರಾಮಸ್ಥರು ಸಾಥ ನೀಡಿದ್ದಾರೆ.ಒಟ್ಟಿನಲ್ಲಿ ಶಾಲಾ ಕೊಠಡಿಗಳಿಗಾಗಿ ಪ್ರತಿಭಟನೆ ನಡೆಸಿದ್ದ ಮುಖ್ಯಶಿಕ್ಷಕನನ್ನು ಅಮಾನತ್ತು ಮಾಡಿರುವುದು ಮಾತ್ರ ದುರಂತ. ಆದರೆ, ಅದೇ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ವೀರಣ್ಣ ಮಡಿವಾಳರ ಅವರನ್ನು ಪುನಃ ಕರ್ತವ್ಯಕ್ಕೆ ಹಾಜರುಪಡಿಸಬೇಕೆಂದು ಆಗ್ರಹಿಸುತ್ತಿದ್ದಾರೆ.

Tags:

error: Content is protected !!