ಬರುವ ಜುಲೈ 9 ರಂದು ಅಂದಾಜು 4 ಸಾವಿರ ಕೋಟಿ ರೂಪಾಯಿ ಅನುದಾನದಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ, ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸುವುದಕ್ಕಾಗಿ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಆಗಮಿಸಲಿದ್ದರು ಆದರೆ ಕಾರಣಾಂತರಗಳಿಂದ ಜುಲೈ 9 ರ ಬದಲಾಗಿ ಜುಲೈ 14 ಕ್ಕೆ ಆಗಮಿಸುವರು ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ತಿಳಿಸಿದರು.
ವಿಜಯಪುರ ನಗರದಲ್ಲಿ ಮಾದ್ಯಮಗೋಷ್ಠಿಯಲ್ಲಿ ಮಾತನಾಡಿದ ಯಶವಂತ ರಾಯಗೌಡ ಪಾಟೀಲ ಜುಲೈ 14 ರಂದು ಇಂಡಿ ಪಟ್ಟಣದ ಪೊಲೀಸ್ ಪರೇಡ್ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಅಂದು ಸಿಎಂ ಸಿದ್ದರಾಮಯ್ಯ ಇವರಿಂದ ಇಂಡಿ ತಾಲೂಕಿನಲ್ಲಿ ಕೈಗೊಂಡಿರುವ 19 ಕೆರೆ ತುಂಬುವ ಯೋಜನೆ, ತಿಡಗುಂದಿ ಏತ ನೀರಾವರಿ ವಿಸ್ತರಣೆ, ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಕಾಮಗಾರಿ ಹಂತ-2 ಮತ್ತು 3, ತಡವಲಗಾ ಕೆಜಿಬಿವಿ ಶಾಲಾ ಕಟ್ಟಡ ನಿರ್ಮಾಣ, ಕಾರ್ಮಿಕರ ಮಕ್ಕಳಿಗಾಗಿ ವಸತಿ ಶಾಲೆ,
ಮೌಲಾನಾ ಅಬುಲ್ ಕಲಾಂ ವಸತಿ ಶಾಲೆ, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ತಾಂತ್ರಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಕೊಠಡಿಗಳ ಕಾಮಗಾರಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಝಳಕಿ, ಮಿರಗಿ ಗ್ರಾಮದ ಪಶು ಆಸ್ಪತ್ರೆ ಉದ್ಘಾಟನೆ, ಇಂಡಿ ತಾಲೂಕಿನ ಲಾಳಸಂಗಿ ಕೆರೆ ಸುಧಾರಣೆ, ಲೋಕೋಪಯೋಗಿ ಇಲಾಖೆ ಕಾಮಗಾರಿಗಳು, ಲಚ್ಯಾಣ ಗ್ರಾಮದ ಬಾಲಕರ ವಸತಿ ನಿಲಯ ನಿರ್ಮಾಣ, ವಿವಿಧ ಸಮುದಾಯ ಭವನಗಳ ನಿರ್ಮಾಣ, ಸಿಸಿ ರಸ್ತೆ ಕಾಮಗಾರಿ, ಮೆಘಾ ಮಾರುಕಟ್ಟೆ ಲೋಕಾರ್ಪಣೆ, ಮಿರಗಿ ಗ್ರಾಮದ ಹಳ್ಳಕ್ಕೆ ಬ್ರಿಜ್-ಕಂ-ಬ್ಯಾರೇಜ್ ನಿರ್ಮಾಣದ ಭೂಮಿ ಪೂಜೆ, ನಗರದ ತಾಲೂಕು ಕ್ರೀಡಾಂಗಣದ ವಿವಿಧ ಅಭಿವೃದ್ದಿ ಕಾಮಗಾರಿಗಳ ಭೂಮಿಪೂಜೆ, ಪ್ರಗತಿ ಪಥ ಯೋಜನೆ ರಸ್ತೆ ಕಾಮಗಾರಿಗೆ ಭೂಮಿಪೂಜೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ನೆರವೇರಲಿದೆ ಎಂದು ತಿಳಿಸಿದರು.