Vijaypura

ಜಮೀನುಗಳಿಗೆ ಹೋಗುವ ವಹಿವಾಟಿನ‌ ದಾರಿ ಸಮಸ್ಯೆ: ಸರ್ಕಾರದ ಆದೇಶವಿದ್ದರೂ ಕೆಲ ರೈತರ ಡೋಂಟ್ ಕೇರ್, ದಾರಿ ಸಮಸ್ಯೆ ಬಗೆ ಹರಿಸುವಂತೆ ಕೆಲ ರೈತರ ಒತ್ತಾಯ

Share

ವಿಜಯಪುರ  : ರಾಜ್ಯದಲ್ಲಿ ಇಂದು ಅದೆಷ್ಟೋ ರೈತರಿಗೆ ತಮ್ಮ ತಮ್ಮ ಜಮೀನುಗಳಿಗೆ ಹೋಗಲು ಸೂಕ್ತ ರಸ್ತೆಗಳಿಲ್ಲ, ಜಮೀನಿಗೆ ಹೋಗುವ ರಸ್ತೆಯ ವಿಚಾರವಾಗಿ ಅದೆಷ್ಟೋ ಜನ ರೈತರು ಬಡಿದಾಡಿಕೊಂಡು, ಕೊಲೆಗಳಾದ ಉದಾಹರಣೆಗಳು ಸಹ ಇವೆ. ಇದೆಲ್ಲವನ್ನು ಮನಗಂಡ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಕಳೆದ ಹಲವು ವರ್ಷಗಳಿಂದ ಈ ವಿಚಾರವಾಗಿ ಹೋರಾಟ ನಡೆಸುತ್ತಿದ್ದರು. ಸದ್ಯ ಈ ವಿಚಾರವಾಗಿ ಸರ್ಕಾರ ನಿರ್ಧಾರ ಕೈಗೊಂಡಿದ್ದು ತಹಶಿಲ್ದಾರ ಅವರಿಗೆ ಅಧಿಕಾರ ನೀಡಿದೆ. ಆದರೆ ಈ ವಿಚಾರ ಇನ್ನೂ ಕಾರ್ಯ ರೂಪಕ್ಕೆ ಬಂದಿಲ್ಲ ಹೀಗಾಗಿ ರೈತರು ಜಮೀನುಗಳಿಗೆ ಹೋಗಲು ದಾರಿ ಸಮಸ್ಯೆಯಿಂದ ಪರದಾಡುವಂತಾಗಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ…

ಹೌದು ಇತ್ತೀಚಿನ ಕೆಲ ವರ್ಷಗಳಲ್ಲಿ ಅಕ್ಕಪಕ್ಕದ ಜಮೀನಿನವರ ಜಗಳ ಇರೋದು ಸಾಮಾನ್ಯವಾಗಿ ಬಿಟ್ಟಿದೆ, ಇದಕ್ಕೆ ಪ್ರಮುಖ ಕಾರಣ, ಅವರುಗಳ ಜಮೀನಿಗೆ ಹೋಗಲು ಸರಿಯಾದ ರಸ್ತೆ ಇರದಿರುವದು. ಇದೆಲ್ಲವನ್ನು ಮನಗಂಡು ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ವಿಜಯಪುರ ನಗರದಲ್ಲೇ ಮೊದಲ ಬಾರಿಗೆ ಇಡೀ ರಾಜ್ಯದ ಸಮಸ್ಯೆ ಮನಗಂಡು ಹೋರಾಟ ಆರಂಭಿಸಿದ್ದರು‌. ಈ ಮುಂಚೆ ಅಂದರೆ 2002 ಕ್ಕೂ ಮೋದಲು ರೈತರ ಜಮೀನುಗಳಿಗೆ ಹೋಗುವ ರಸ್ತೆಗಳ ಸಮಸ್ಯೆ ಉಂಟಾದರೆ ಅದನ್ನು ತಹಶಿಲ್ದಾರರ‌ ಮಟ್ಟದಲ್ಲಿ ಸಮಸ್ಯೆ ಬಗೆ ಹರಿಸಲಾಗುತ್ತಿತ್ತು. ಆದರೆ ಈಗ ಆ ಅಧಿಕಾರವನ್ನು ಸಿವಿಲ್ ನ್ಯಾಯಾಲಯದಲ್ಲಿ ಧಾವೆ ಹೂಡಿ ರಸ್ತೆ ಪಡೆಯಬೇಕು, ಸಿವಿಲ್ ನ್ಯಾಯಾಲಯದಲ್ಲಿ ತೀರ್ಪು ಬರಲು ವರ್ಷಗಳೇ ಕಳೆದು ಹೋಗುತ್ತವೆ. ಈ ಹಿನ್ನಲೆಯಲ್ಲಿ ಮೊದಲಿನ ಹಾಗೆ ಮತ್ತೆ ಈ ಅಧಿಕಾರವನ್ನು ತಹಶಿಲ್ದಾರ ಅವರಿಗೆ ಕೊಡಬೇಕು ಎಂದು ಹಲವು ಬಾರಿ ಪ್ರತಿಭಟನೆ ನಡಸಿ ಒತ್ತಾಯಿಸಿದ್ದರು, ಆದರೆ ಸದ್ಯ ಈಗ ಇದಕ್ಕೊಂದು ತಾರ್ಕಿಕ ಅಂತ್ಯ ಹಾಡಿದಂತಾಗಿದೆ‌. ಈಗ ಸರ್ಕಾರ ತಹಶಿಲ್ದಾರ ಅವರಿಗೆ ಮತ್ತೆ ಈ ಸಮಸ್ಯೆಯನ್ನು ಬಗೆಹರಿಸುವಂತೆ ಅಧಿಕಾರ ನೀಡಿದ್ದಾರೆ. ಆದರೆ ಈ ವಿಚಾರವಾಗಿ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.

ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ತಾಜಪೂರ್ ಎಚ್ ಗ್ರಾಮದಲ್ಲಿ ಸರ್ವೆ ನಂಬರ್ 253 ಕ್ಕೆ ಹೋಗಲು ನ್ಯಾಯಾಲಯದ ಆದೇಶ ಇದ್ದು ಗ್ರಾಮ ನಕ್ಷೆಯಲ್ಲಿ ರಸ್ತೆ ಇದ್ದರೂ ಕೂಡ ತೊಂದರೆ ನೀಡಲಾಗುತ್ತಿದೆ. ಇದನ್ನು ತಹಶಿಲ್ದಾರ ಅವರ ಗಮನಕ್ಕೆ ತಂದರೂ ಕೂಡ ರೈತನ ಗೋಳು ಕೇಳುವವರು ಇಲ್ಲದಂತಾಗಿದೆ. ನ್ಯಾಯಾಲಯದ ಆದೇಶವಾಗಿ ಎರಡು ತಿಂಗಳಾದರೂ ತಮ್ಮ ಸಹಾಯಕ್ಕೆ ಅಧಿಕಾರಿಗಳು ಬರುತ್ತಿಲ್ಲ ಎಂದು ರೈತ ಸಿದ್ರಾಮ ಕೈರಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಕ್ಷೆಯಲ್ಲಿ ರಸ್ತೆ ಇದ್ದರೂ ರೈತರ ಚಟುವಟಿಕೆಗೆ ತೊಂದರೆ ಮಾಡಬಾರದು ಅನ್ನುವ ಆದೇಶವಿದ್ದರೂ ಅಧಿಕಾರಿಗಳು ಒತ್ತಡಕ್ಕೆ ಮಣಿದು ರೈತನ ಪರ ಕೆಲಸ ಮಾಡುತ್ತಿಲ್ಲ ಎಂದು ರೈತ ಆಕ್ರೋಶ ವ್ಯಕ್ತಪಡಿಸಿದರು…

ಇನ್ನೂ ಅದೆಷ್ಟೋ ರೈತರಿಗೆ ಜಮೀನಿಗೆ ಹೋಗಲು ರಸ್ತೆ ಇರದ ಕಾರಣ ಅವರ ಜಮೀನು ಹಾಳಾಗಿ ಹೋಗುವ ಪರಿಸ್ಥಿತಿ ಕೂಡಾ ರಾಜ್ಯದ ಹಲವು ಜಿಲ್ಲೆಯಲ್ಲಿ ಇನ್ನೂ ಕೂಡಾ ಇದೆ. ಸರ್ಕಾರದ ಆದೇಶ ಇದ್ದರೂ ಕೂಡಾ ಅಧಿಕಾರಿಗಳು ಕ್ರಮ ವಹಿಸದಿರುವದು ನಿಜಕ್ಕೂ ಶೋಚನೀಯ. ಇನ್ನೂ ಮುಂದೆಯಾದರೂ ಸಂಬಂಧ ಪಟ್ಟ ಅಧಿಕಾರಿಗಳು ಈ ರೈತನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮ‌ ಜರುಗಿಸಬೇಕಿದೆ…

Tags:

error: Content is protected !!