ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಜನರ ರಕ್ಷಣೆಗಾಗಿ ತಮ್ಮ ಜೀವನ ಮುಡುಪಾಗಿರಿಸುವ ಆರಕ್ಷಕರ ಮೇಲೆ ಗದಾ ಪ್ರಹಾರ ಮಾಡುವ ಮೂಲಕ ರಾಜ್ಯ ಸರ್ಕಾರ ಒಂದು ರೀತಿ ತುಘಲಕ್ ದರ್ಬಾರ ನಡೆಸುತ್ತಿದೆ ಎಂದು ಭಾರತೀಯ ಜನತಾ ಪಕ್ಷ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನಕಾರ್ಯದರ್ಶಿ ಉಮೇಶ ಕಾರಜೋಳ ಸರ್ಕಾರದ ನಡೆ ಟೀಕಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ತಾನು ವಿವೇಚನಾ ರಹಿತ ನಿರ್ಧಾರ ಕೈಗೊಂಡು ನಂತರ ಅದನ್ನು ಪೊಲೀಸ್ ಅಧಿಕಾರಿಗಳ ತಲೆಗೆ ಕಟ್ಟುವ ಮೂಲಕ ರಾಜ್ಯ ಸರ್ಕಾರ ತನ್ನ ಬೇಜವಾಬ್ದಾರಿ ಪರಮಾವಧಿ ಮೀರಿದೆ. ಈ ಹಿಂದೆಯೂ ಕಾಂಗ್ರೆಸ್ ಸಮಾವೇಶದಲ್ಲಿ ವಿನಾಕಾರಣ ಮುಖ್ಯಮಂತ್ರಿಗಳು ಧಾರವಾಡ ಎ.ಎಸ್.ಪಿ. ನಾರಾಯಣ ಭರಮನಿ ಅವರನ್ನು ಸಾರ್ವಜನಿಕವಾಗಿಯೇ ಕೈ ಎತ್ತಲು ಮುಂದಾಗಿದ್ದರು, ಈಗ ಬೆಂಗಳೂರು ಕಾಲ್ತುಳಿತ ಘಟನೆಗೆ ಪೊಲೀಸ್ ರನ್ನೇ ನೈತಿಕ ಹೊಣೆಗಾರರನ್ನಾಗಿ ಮಾಡಿ ಆಯುಕ್ತ ಬಿ. ದಯಾನಂದ ಅವರನ್ನು ಅಮಾನತ್ತು ಮಾಡಿದೆ, ಈ ರೀತಿಯ ಘಟನೆಗೆ ರಾಜ್ಯ ಸರ್ಕಾರವೇ ನೇರ ಹೊಣೆ, ತಾನು ನೈತಿಕ ಹೊರೆ ಹೊರುವುದನ್ನು ಬಿಟ್ಟು ಆ ಹೊಣೆಯನ್ನು ಇಲಾಖೆ ಮೇಲೆ ಹೊರೆಸಿದರೆ ಹೇಗೆ?

ಅದೇ ತೆರನಾಗಿ ವಿಜಯನಗರ ಜಿಲ್ಲಾಧಿಕಾರಿಗಳನ್ನು ಸಹ ಸಾರ್ವಜನಿಕವಾಗಿ ಅವಮಾನ ಮಾಡಿದ ಘಟನೆಯೂ ಸಹ ನಡೆದಿದೆ. ಈ ರೀತಿ ಅಧಿಕಾರಿಗಳ ಮೇಲೆ ದಬ್ಬಾಳಿಕೆಯ ಮೂಲಕ ಕಾರ್ಯಾಂಗದ ಮೂಲಕ ಗದಾ ಪ್ರಹಾರ ಮಾಡುವುದು ಪ್ರಜಾಪ್ರಭುತ್ವ ವಿರೋಧಿ ಕೂಢಾ ಹೌದು. ಮೂವರು ಅಧಿಕಾರಿಗಳನ್ನು ಸಾರ್ವಜನಿಕವಾಗಿ ಅಸಹ್ಯ ಮಾಡಿದ್ದು ನಮ್ಮ ಮುಖ್ಯಮಂತ್ರಿಗಳೇ, ಆದರೇ ಇದ್ದುದರಲ್ಲಿ ಸಣ್ಣ ಸಭ್ಯತೆಯಿಂದ ನಡೆದುಕೊಳ್ಳುವ ಗೃಹ ಸಚಿವರ ಮಾತು ಅವರ ಸರ್ಕಾರದಲ್ಲಿಯೇ ನಡೆಯುವುದಿಲ್ಲ.
ಬಿ. ದಯಾನಂದ ಪ್ರಚಾರದಿಂದ ದೂರ ಉಳಿದು ದಕ್ಷತೆಯಿಂದ ಕೆಲಸ ಮಾಡುವ ಅಧಿಕಾರಿ, ಹಾಲಿ ಸಿದ್ದರಾಮಯ್ಯರ ಸರಕಾರದಲ್ಲಿ ಬೆಂಗಳೂರಿನ ಕಾನೂನು ಸುವ್ಯವಸ್ಥೆ ಕಾಯುವುದರಲ್ಲಿ ಅವರ ಪಾತ್ರ ಅತ್ಯಂತ ಪ್ರಮುಖವಾಗಿದೆ. ತಾನುಮಾಡಿದ ತಪ್ಪನ್ನು ಮುಚ್ಚಿಕೊಳ್ಳಲು ಸರ್ಕಾರ ಅವರಿಗೆ ಅಮಾನತ್ತು ಎಂಬ ಉಡುಗೊರೆ ನೀಡಿದೆ, ಇದು ಕಾಂಗ್ರೆಸ್ ಸರ್ಕಾರ ಕಾರ್ಯಾಂಗವನ್ನು ನಡೆಸಿಕೊಳ್ಳುತ್ತಿರುವ ರೀತಿ ಎಂದು ಕಾರಜೋಳ ಕಿಡಿಕಾರಿದ್ದಾರೆ.
ಇನ್ನುಳಿದಂತೆ ಎಸಿಪಿ, ಸೆಂಟ್ರಲ್ ಡಿಸಿಪಿ, ಕ್ರೀಡಾಂಗಣ ಉಸ್ತುವಾರಿ ವಹಿಸಿದ್ದ ಅಪರ ಪೊಲೀಸು ಆಯುಕ್ತ, ಕಬ್ಬನ್ ಪಾರ್ಕ್ ಠಾಣೆ ಇನ್ಸಪೆಕ್ಟರ್ ಹಾಗೂ ಸ್ಟೇಶನ್ ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿದೆ. ಅಕ್ಷರಶಃ ಇದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ನಡುವಿನ ಸಮರದ ಮತ್ತೊಂದು ಭಾಗ ಅನ್ನುವುದು ಸಾರ್ವಜನಿಕವಾಗಿ ಅದೆಲ್ಲರ ಗಮನಕ್ಕೆ ಬಂದಾಗಿದೆ.
ಇನ್ನಾದರು ಗೃಹ ಸಚಿವರು, ಪೊಲೀಸು ಇಲಾಖೆ ಹಿರಿಯ ಅಧಿಕಾರಿಗಳು ತಮಗಾಗುತ್ತಿರುವ ಅನ್ಯಾಯದ ಕುರಿತು ದ್ವನಿ ಎತ್ತಬೇಕು ಎಂದು ಕಾರಜೋಳ ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿಗಳ ಅಮಾನತ್ತಿನ ನಿರ್ಧಾರದಿಂದ ಪೊಲೀಸು ಇಲಾಖೆಯ ನೌಕರರು ಆತ್ಮಸ್ಥೈರ್ಯವನ್ನು ಕಳಕೊಂಡಿದ್ದಾರೆ ಎಂದು ಕಾರಜೋಳ ಹೇಳಿದ್ದಾರೆ.