ಧಾರವಾಡ: ನಾನು ಯಾವುದೋ ಬಡವರ ಮನೆಯಲ್ಲಿ, ರೆಡ್ ಲೈಟ್ ಏರಿಯಾದಲ್ಲಿ ಹುಟ್ಟಿದ್ರೆ ಎಲ್ಲೋ ಇರುತ್ತಿದೆ. ಆದರೆ, ನಾನು ಅದೃಷ್ಟಶಾಲಿ ಈಗ ಇಲ್ಲಿದ್ದೇನೆ. ಹಣೆಬರಹ ಬದಲಾಯಿಸೋಕೆ ಆಗುವುದಿಲ್ಲ. ಆದರೆ, ಒಂದು ಮಾತು ಮಾತ್ರ ಹೇಳಬಲ್ಲೆ. ನಾನು ಎಷ್ಟು ದಿನ ರಾಜಕೀಯದಲ್ಲಿ ಇರುತ್ತೇನೋ ಗೊತ್ತಿಲ್ಲ. ಎಷ್ಟು ದಿನ ಬದುಕುತ್ತೇನೋ ಗೊತ್ತಿಲ್ಲ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮಾರ್ಮಿಕವಾದ ಮಾತುಗಳನ್ನಾಡಿದ್ದಾರೆ.
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಬುದ್ಧ, ಬಸವ, ಅಂಬೇಡ್ಕರ್ ಕುರಿತಾದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಎಲ್ಲಿಯವರೆಗೆ ದೇವರು ಶಕ್ತಿ, ಉಸಿರು ಕೊಟ್ಟಿದ್ದಾನೋ ಅಲ್ಲಿಯವರೆಗೆ ಬಡವರ ಪರ ಪ್ರಾಮಾಣಿಕ ಕೆಲಸ ಮಾಡುತ್ತೇನೆ. ರಾಜಕೀಯದಲ್ಲಿ ನಾನು ಇರಲಿ. ಇಲ್ಲದಿರಲಿ ನಾನು ಪ್ರಾಮಾಣಿಕವಾಗಿ ಬಡವರ ಪರ ಕೆಲಸ ಮಾಡುತ್ತೇನೆ. ಇವತ್ತು ಬದಲಾವಣೆ ಗಾಳಿ ಬೀಸಿದೆ. ರಾಜಕೀಯ ವ್ಯವಸ್ಥೆ ಬದಲಾಗಬೇಕಿದೆ. ಈ ಬದಲಾವಣೆ ಇಂದಿನ ಯುವ ಪೀಳಿಗೆಯಿಂದ ಮಾತ್ರ ಸಾಧ್ಯ ಎಂದರು.