ಬೆಂಗಳೂರು ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಆರಕ್ಷಕ ಅಧಿಕಾರಿಗಳನ್ನು ರಾಜ್ಯ ಸರ್ಕಾರ ತಲೆದಂಡ ಮಾಡಿರುವುದು ಸರಿಯಲ್ಲ ಎಂದ ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯ ಸರ್ಕಾರ ಅತ್ಯಂತ ಕೆಟ್ಟ ಆಡಳಿತ ನಡೆಸುತ್ತಿದೆ, ವಿವೇಚನೆ ರಹಿತವಾಗಿ ನಡೆದುಕೊಂಡ ಪರಿಣಾಮ ಹಲವಾರು ಜನರು ಕಾಲ್ತುಳಿತದಲ್ಲಿ ಅಸುನೀಗುವಂತಾಗಿದೆ.
ರಾಜ್ಯ ಸರ್ಕಾರ ಮೊದಲಿನಿಂದಲೂ ಪೊಲೀಸರ ಮೇಲೆ ಒತ್ತಡ ಹೇರುವ ಕೆಲಸ ಮಾಡುತ್ತಿದೆ, ಪೊಲೀಸ್ ಬಲ ಪ್ರಯೋಗಿಸಿ ಒತ್ತಡ ಹಾಕಿ ಬಿಜೆಪಿ ಮುಖಂಡರ ಹಾಗೂ ಕಾರ್ಯಕರ್ತ ಮೇಲೆ ಕೇಸು ಹಾಕುವಲ್ಲಿ ತೊಡಗಿದ್ದ ಕಾಂಗ್ರೆಸ್ ಸರ್ಕಾರ ಈಗ ಅದೇ ಪೊಲೀಸರನ್ನು ತಲೆದಂಡ ಮಾಡಿದೆ, ಪೊಲೀಸರು ಈ ವಿಷಯವನ್ನು ಮನವರಿಕೆ ಮಾಡಿಕೊಳ್ಳಬೇಕಾಗಿದೆ. ನಾನು ಸಹ ಗೃಹ ಸಚಿವನಾಗಿ ಕರ್ತವ್ಯ ನಿರ್ವಹಿಸಿದ್ದೇನೆ, ನನ್ನ ರಾಜಕೀಯ ಜೀವನದ ಅನುಭವದಲ್ಲಿ ಪೊಲೀಸ್ ವ್ಯವಸ್ಥೆಯನ್ನು ದುರಪಯೋಗಪಡಿಸಿಕೊಂಡ ಈ ರೀತಿ ಸರ್ಕಾರವನ್ನು ನಾನು ನೋಡಿಲ್ಲ, ಅಷ್ಟೊಂದು ಪ್ರಮಾಣದಲ್ಲಿ ಪೊಲೀಸರ ಮೇಲೆ ಒತ್ತಡ ಹಾಕುತ್ತಿದೆ, ಮೊನ್ನೆ ಧಾರವಾಡ ಎ.ಎಸ್.ಪಿ. ಅವರನ್ನು ಬಹಿರಂಗವಾಗಿಯೇ ಹೊಡೆಯಲು ಮುಖ್ಯಮಂತ್ರಿ ಮುಂದಾಗಿದ್ದರು, ಈಗ ಕಾಲ್ತುಳಿತ ಘಟನೆಗೂ ಸಹ ಪೊಲೀಸರನ್ನೇ ಅಪರಾಧಿಗಳಾಗಿ ಬಿಂಬಿಸಲು ಹೊರಟಿದೆ, ಆ ಮೂಲಕ ಒಂದು ರೀತಿ ಕಾಂಗ್ರೆಸ್ ಸರ್ಕಾರ ಅಧಿಕಾರಿ ವರ್ಗವವನ್ನು ಒತ್ತಡಕ್ಕೆ ಸಿಲುಕಿಸುವ ಮೂಲಕ ಕೆಟ್ಟ ಪರಂಪರೆಗೆ ನಾಂದಿ ಹಾಡಿದೆ.

ಈ ಹಿಂದೆ ದಿ.ರಾಮಕೃಷ್ಣ ಹೆಗಡೆ ಅವರು ತಮ್ಮ ಮೇಲೆ ಸಣ್ಣ ಆಪಾದನೆ ಬಂದಾಗ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಿದರು. ಆದರೆ ದೊಡ್ಡ ಆರೋಫ, ಆಡಳಿತ ವೈಫಲ್ಯವಾದರೂ ಮುಖ್ಯಮಂತ್ರಿ ತಾವು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡುವ ಬದಲು ಇಡೀ ತಪ್ಪನ್ನು ಪೊಲೀಸ್ ಇಲಾಖೆ ಕಟ್ಟುವ ಕೆಟ್ಟ ಕ್ರಮ ಕೈಗೊಂಡಿದ್ದಾರೆ ಎಂದು ಜಿಗಜಿಣಗಿ ಹೇಳಿದ್ದಾರೆ.