ರಾಜ್ಯದ ಎಲ್ಲಾ ವಿಧಧ ನ್ಯಾಯಾಲಯಗಳಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಸೂಕ್ತ ಸ್ಥಳದಲ್ಲಿ ಅಳವಡಿಸಲು ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ ಆದೇಶ ನೀಡಿದ್ದರಿಂದ ಚಿಕ್ಕೋಡಿ ತಾಲ್ಲೂಕಿನ ವಿವಿಧ ದಲಿತ ಸಂಘಟನೆಗಳು ಹರ್ಷ ವ್ಯಕ್ತಪಡಿಸಿವೆ.
ಚಿಕ್ಕೋಡಿ ಪಟ್ಟಣದ ಲೋಕೋಪಯೋಗಿ ಪ್ರವಾಸಿ ಮಂದಿರದ ಸಭಾಭವನದಲ್ಲಿ ಚಿಕ್ಕೋಡಿ ತಾಲೂಕಿನ ವಿವಿಧ ದಲಿತ ಸಂಘಟನೆಗಳ ಮುಖಂಡರು ಕರೆದ ಸಭೆಯಲ್ಲಿ ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯ ಹೊರಡಿಸಿದ ಆದೇಶ ಪ್ರತಿಯನ್ನು ಪ್ರದರ್ಶಿಸಿ ಹೆಮ್ಮೆ ವ್ಯಕ್ತಪಡಿಸಿದರು. ಸಂವಿಧಾನ ಜಾರಿಗೆ ಬಂದು 75 ವರ್ಷಗಳು ಗತಿಸಿದ ಬಳಿಕ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಭಾವಚಿತ್ರವನ್ನು ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಅಳವಡಿಸಲು ಅವಕಾಶ ನೀಡಿದ್ದು ಶ್ಲಾಘನೀಯವಾಗಿದೆ” ಎಂದರು.
ಈ ಕುರಿತು ಚಿಕ್ಕೋಡಿ ಪಟ್ಟಣದ ವಕೀಲ ನಂದಕುಮಾರ ದರಬಾರೆ ಸೇರಿದಂತೆ ಹಲವರು ಕಾನೂನು ಸಂಘರ್ಷ ನಡೆಸಿದ್ದು, ಜೂನ್ 19ರಂದು ಉಚ್ಚ ನ್ಯಾಯಾಲಯ ಆದೇಶ ನೀಡಿದ್ದು, 2022ರಿಂದ ಈ ಕುರಿತು ಸಂಬಂಧಿಸಿದವರಿಗೆ ಪತ್ರ ಬರೆದು ಗಮನಕ್ಕೆ ತರಲಾಗಿತ್ತು ಎಂದು ದಲಿತ ಮುಖಂಡರಾದ ಅಶೋಕ ಭಂಡಾರಕರ, ಅಪ್ಪಾಸಾಹೇಬ ಬ್ಯಾಳಿ, ಸುಭಾಷ ಗಾಯಗೊಳ ಹರ್ಷ ವ್ಯಕ್ತಪಡಿಸಿದರು.