ಬೆಂಗಳೂರಿನಲ್ಲಿ ಆರ್ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಮಾಜಿ ಶಾಸಕ ಅಮೃತ ದೇಸಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ಧಾರವಾಡದಲ್ಲಿ ಮಾಧ್ಯಮಕ್ಕೆ ಪ್ರತಿಕ್ರೆಯೆ ನೀಡಿದ ಅವರು, ಡಿ.ಕೆ.ಶಿವಕುಮಾರ್ ಅವರು ತಾವೇ ಸಿಕ್ಸ್, ಫೋರ್ ಹೊಡೆದು ಮ್ಯಾಚ್ ಗೆಲ್ಲಿಸಿದವರ ಹಾಗೆ ಸ್ಟೇಡಿಯಂಗೆ ಹೋಗಿ ಪೋಸ್ ಕೊಟ್ಟಿದ್ದಾರೆ. ತಾವೇ ಮ್ಯಾಚ್ ಗೆದ್ದವರಂತೆ ಮಾಡಿದ್ದಾರೆ. ಹೊರಗಡೆ ಕಾಲ್ತುಳಿತದಲ್ಲಿ ಜನ ಸತ್ತಿದ್ದಾರೆ ಇದು ಡಿ.ಕೆ.ಶಿವಕುಮಾರ್ ಅವರೇ ಮಾಡಿಸಿದ ಪ್ರಾಯೋಜಿತ ಕೊಲೆ ಎಂದು ಆರೋಪಿಸಿದರು. ಅಲ್ಲದೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ದಯಾನಂದ ಅವರೊಬ್ಬ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ. ಆರ್ಸಿಬಿ ವಿಜಯೋತ್ಸವಕ್ಕೆ ಪೊಲೀಸರು ಸ್ವಲ್ಪ ಸಮಯ ಕೊಡಿ ನಾವೆಲ್ಲ ವ್ಯವಸ್ಥೆ ಮಾಡಿಕೊಳ್ಳುತ್ತೇವೆ ಎಂದಿದ್ದರು. ಆದರೆ, ಡಿಕೆಶಿ ಅವರು ತಾವೇ ಮ್ಯಾಚ್ ಗೆದ್ದವರಂತೆ ತೋರಿಸಿಕೊಳ್ಳಬೇಕಿತ್ತು.

ತರಾತುರಿಯಲ್ಲಿ ಯಾವುದೇ ವ್ಯವಸ್ಥೆ ಇಲ್ಲದೇ ಈ ವಿಜಯೋತ್ಸವ ಆಚರಿಸಿ 11 ಜನರ ಸಾವಿಗೆ ಕಾರಣವಾಗಿದ್ದಾರೆ. ಹೊರಗಡೆ ಹೆಣ ಬಿದ್ದರೂ ಡಿಕೆಶಿ ಮಾತ್ರ ಸ್ಟೇಡಿಯಂ ಒಳಗಡೆ ಹೋಗಿ ಕಪ್ಗೆ ಮುತ್ತಿಟ್ಟು ಆಟಗಾರರಿಗೆ ಕನ್ನಡದ ಬಾವುಟ ಹಾಕಿ ತಾವು ಮಾತ್ರ ಎರಡೂವರೆ ಮೂರು ಲಕ್ಷ ಮೌಲ್ಯದ ಲೂವಿವಿಟನ್ ಶಾಲ್ ಹಾಕಿಕೊಂಡಿದ್ದಾರೆ. ಆಟಗಾರರ ಮೇಲೆ ಅಭಿಮಾನವಿರಬೇಕು ಆದರೆ, ಅದಕ್ಕೊಂದು ಸಂದರ್ಭ ಇರುತ್ತದೆ. ಇವರೇ ಹೋಗಿ ಮ್ಯಾಚ್ ಗೆದ್ದವರಂತೆ ವರ್ತಿಸಿದ್ದಾರೆ. 18 ವರ್ಷದಿಂದ ನಮಗೂ ನಿರೀಕ್ಷೆ ಇತ್ತು. ನಾವೂ ಸಹ ಆರ್ಸಿಬಿ ಗೆದ್ದಾಗ ಪಟಾಕಿ ಹಾರಿಸಿದ್ದೇವೆ. ನಾವೂ ಕೂಡ ಕ್ರಿಕೆಟ್ ಅಭಿಮಾನಿ. ಆದರೆ, ಈ ವಿಜಯೋತ್ಸವಕ್ಕೊಂದು ವ್ಯವಸ್ಥೆ ಮಾಡಿಕೊಳ್ಳಬೇಕಿತ್ತು. ಇದರ ಸಂಪೂರ್ಣ ಜವಾಬ್ದಾರಿಯನ್ನು ಡಿಕೆಶಿ ಅವರೇ ಹೊರಬೇಕು. ಕೂಡಲೇ ಅವರು ರಾಜೀನಾಮೆ ಕೊಡಬೇಕು ಎಂದು ಅಮೃತ ದೇಸಾಯಿ ಒತ್ತಾಯಿಸಿದರು. ಜತೆಗೆ ಇದರಲ್ಲಿ ಅಧಿಕಾರಿಗಳನ್ನು ಬಲಿಪಶು ಮಾಡಿದ್ದು ತಪ್ಪು. ಪೊಲೀಸರನ್ನು ಅಮಾನತ್ತು ಮಾಡಬಾರದಿತ್ತು. ಆ ಸಂದರ್ಭದಲ್ಲಿ ಗಾಯಾಳುಗಳನ್ನು ಪೊಲೀಸರೇ ಎತ್ತಿಕೊಂಡು ಸಾಗಿಸಿದ್ದಾರೆ. ಈ ವಿಷಯದಲ್ಲಿ ಸರ್ಕಾರ ಪೊಲೀಸರಿಗೆ ಬೆಂಬಲ ನೀಡಬೇಕಿತ್ತು. ಆದರೆ, ಹಿರಿಯ ಅಧಿಕಾರಿಗಳನ್ನೇ ಅಮಾನತ್ತು ಮಾಡಿರುವ ಈ ಸರ್ಕಾರ ಯಾವ ಪಾಪಕ್ಕೆ ಗುರಿಯಾಗುತ್ತೋ? ಎಂದು ಕಿಡಿಕಾರಿದರು.