ಇಸ್ರೋ ಮತ್ತು ನಾಸಾ ಜಂಟಿಯಾಗಿ ಕೈಗೊಂಡಿರುವ ಎಕ್ಸಿಯೋಮ್-4 ಮಿಷನ್ಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ವಿಶೇಷ ಕೊಡುಗೆ ನೀಡಿದೆ. ಈ ಅಂತರಿಕ್ಷೆ ಯಾತ್ರೆಗೆ ಧಾರವಾಡದಿಂದ ಹೆಸರು ಮತ್ತು ಮೆಂತ್ಯೆ ಕಾಳುಗಳು ಹೋಗಿವೆ. ಈ ಬಗ್ಗೆ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್.ಪಾಟೀಲ ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಕೃಷಿ ವಿಶ್ವವಿದ್ಯಾಲಯದಿಂದ ಎರಡು ಕಾಳುಗಳನ್ನು ಆಯ್ಕೆ ಮಾಡಿ ಕಳುಹಿಸಲಾಗಿದೆ. ಇಸ್ರೋ, ಕೃಷಿ ವಿವಿ ಹಾಗೂ ಧಾರವಾಡ ಐಐಟಿ ಸಹಯೋಗದೊಂದಿಗೆ ಈ ಕಾಳುಗಳನ್ನು ಕಳುಹಿಸಲಾಗಿದೆ. ಬಾಹ್ಯಾಕಾಶಕ್ಕೆ ಹೋದವರಿಗೂ ಪೌಷ್ಟಿಕಾಂಶ ಸಿಗಲಿ ಎಂಬ ಉದ್ದೇಶದಿಂದ ಈ ಕಾಳುಗಳನ್ನು ಕಳುಹಿಸಲಾಗಿದೆ. ಪ್ರತಿದಿನ ನಾವು ಉಪಯೋಗ ಮಾಡುವ ಕೋಸಂಬ್ರಿಯಲ್ಲಿ ಈ ಎರಡೂ ಕಾಳುಗಳನ್ನು ತೆಗೆದುಕೊಂಡು ಅಧ್ಯಯನ ಮಾಡುತ್ತಿದ್ದೇವೆ.
ಹೆಸರು ಮತ್ತು ಮೆಂತ್ಯೆ ಕಾಳು ಮನುಷ್ಯನ ಆರೋಗ್ಯಕ್ಕೆ ಒಳ್ಳೆಯದು. ಇವುಗಳನ್ನು ಗಗನ ಯಾತ್ರೆಯಲ್ಲಿ 40 ಡಿಗ್ರಿಯಲ್ಲಿ ಬಾಹ್ಯಾಕಾಶದಲ್ಲಿ ಇಟ್ಟು ವಾಪಸ್ ಭೂಮಿಗೆ ತರಲಾಗುತ್ತದೆ. 16 ದಿನಗಳ ಬಳಿಕ ಭೂಮಿಗೆ ಇವರು ಬಂದಾಗ ಅವುಗಳ ಪೋಷಕಾಂಶ ಗುಣಮಟ್ಟ ಪರೀಕ್ಷೆ ಮಾಡಲಾಗುತ್ತದೆ ಎಂದರು. ಜತೆಗೆ ಗಗನಯಾತ್ರೆಯಲ್ಲಿ ಸೂಕ್ಷ್ಮಾಣು ಜೀವಿಗಳಿಂದ ಈ ಕಾಳಿಗೆ ಏನಾದರೂ ಪರಿಣಾಮ ಆಗಲಿದೆಯೇ ಎಂಬುದನ್ನು ಪರೀಕ್ಷೆ ಮಾಡಲಾಗುತ್ತದೆ. ಮನುಷ್ಯನಿಗೆ ಆರೋಗ್ಯ ಮುಖ್ಯ. ಅದಕ್ಕೆ ಇದನ್ನು ಪರೀಕ್ಷೆ ಮಾಡಲಾಗುತ್ತದೆ. ಗಗನಯಾತ್ರೆಯಲ್ಲಿ ಬಾಹ್ಯಾಕಾಶಿಗಳು ಈ ಕಾಳು ಉಪಯೋಗ ಮಾಡಬಹುದಾ ಎಂದು ಪರೀಕ್ಷೆ ಮಾಡಲಾಗುತ್ತದೆ.
ಇದನ್ನು ನಮ್ಮ ವಿವಿ ವಿಜ್ಞಾನಿಗಳು ಪ್ರಯೋಗ ಮಾಡುತ್ತಿದ್ದಾರೆ. ಮೆಂತ್ಯೆ ಕಾಳಿನಲ್ಲಿ ಔಷಧಿ ಗುಣಮಟ್ಟ ಹೆಚ್ಚಿರುತ್ತದೆ. ಸಕ್ಕರೆ ಕಾಯಿಲೆ ಹಾಗೂ ಕಿಡ್ನಿ ಸ್ಟೋನ್ ಇದ್ದವರು ಮೆಂತ್ಯೆ ಕಾಳು ನೆನೆಸಿ ಅದರ ನೀರು ಕುಡಿಯುತ್ತಾರೆ. ಕಾಳನ್ನು ಕೂಡ ಉಪಯೋಗ ಮಾಡುತ್ತಾರೆ. ಈ ರೀತಿಯ ಔಷಧಿ ಗುಣ ಮೆಂತ್ಯೆ ಕಾಳಿನಲ್ಲಿವೆ. ಹೆಸರು ಕಾಳಿನಲ್ಲಿ ಪೌಷ್ಟಿಕತೆ ಇದೆ. ಈ ಹಿನ್ನೆಲೆಯಲ್ಲಿ ಎರಡೂ ಕಾಳುಗಳನ್ನು ಕಳುಹಿಸಲಾಗಿದೆ. ಪ್ರೊಟೀನ್ ನಾರ್ಮಲ್ ಇರುವ ಕಾಳುಗಳನ್ನು ಕಳುಹಿಸಲಾಗಿದೆ ಎಂದು ವಿವರಿಸಿದ್ದಾರೆ.