ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ ಗ್ರೀನ್ ಹೋಟೆಲ್ ಸಮೀಪ ಕ್ಯಾಂಟರ್ ಹಾಗೂ ದ್ವಿಚಕ್ರ ವಾಹನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಯುವಕ ಸಾವನ್ನಪ್ಪಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಕುಟ್ಟಲವಾಡಿ ಗ್ರಾಮದ ವಿನಾಯಕ ವಿಜಯ ಕದಮ (21) ಎಂಬ ಟೆಂಪೋ ಚಾಲಕ, ಚೋರ್ಲಾ ಮೂಲಕ ಜಾಂಬೋಟಿ-ಬೆಳಗಾವಿ ಕಡೆಗೆ ಅತಿವೇಗವಾಗಿ ಹಾಗೂ ಅಜಾಗರೂಕತೆಯಿಂದ ಕ್ಯಾಂಟರ್ (ಸಂಖ್ಯೆ KA 22 AA 9574) ನ್ನು ಚಲಾಯಿಸುತ್ತಿದ್ದಾಗ, ಚೋರ್ಲಾ ಮಾರ್ಗವಾಗಿ ಗೋವಾ ಕಡೆಗೆ ಹೋಗುತ್ತಿದ್ದ ಬೈಕ್ (ಸಂಖ್ಯೆ KA 63 AX 2459) ಸ್ಪ್ಲೆಂಡರ್ ಗೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಈ ಅಪಘಾತದಲ್ಲಿ ಬೈಕ್ ಸವಾರ ದರ್ಶನ ಮೋಹನ್ ಚವಾಣ್ (20) ಗಂಭೀರವಾಗಿ ಗಾಯಗೊಂಡು ಖಾನಾಪೂರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಲ್ಪಟ್ಟರು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಹಿಂಬಾಗದಲ್ಲಿ ಕುಳಿತಿದ್ದ ರಾಜು ಕಲ್ಲಪ್ಪ ಶಿರಪುರ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಬೆಳಗಾವಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಮತ್ತು ಗಾಯಗೊಂಡ ಯುವಕರು ಇಬ್ಬರೂ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕು ರೇವಡಿಹಾಳ ಗ್ರಾಮದ ನಿವಾಸಿಗಳೆಂದು ತಿಳಿದುಬಂದಿದೆ. ಈ ಕುರಿತು ಖಾನಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.