ಟ್ರಾನ್ಸಫಾರ್ಮರ್ ಹತ್ತಿರ ಮೇಯಲು ಕರೆದುಕೊಂಡು ಹೋಗುತ್ತಿದ್ದಾಗ ಎಮ್ಮೆಯೊಂದು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ ಘಟನೆ ಬೆಳಗಾವಿಯ ಬಸವನ ಕುಡಚಿಯಲ್ಲಿ ನಡೆದಿದೆ.
ಬೆಳಗಾವಿ ಬಸವನ ಕುಡಚಿಯಲ್ಲಿ ಟ್ರಾನ್ಸಫಾರ್ಮರ್ ಹತ್ತಿರ ವಿದ್ಯುತ್ ಸ್ಪರ್ಶಿಸಿ ಎಮ್ಮೆಯೊಂದು ಸಾವನ್ನಪ್ಪಿದೆ. ಬಸವಣ ಕುಡಚಿಯ ಶಾಸ್ತ್ರಿ ಗಲ್ಲಿಯ ರಹಿವಾಸಿ ಜಿನ್ನಪ್ಪ ವಂಡರೋಟಿ ಅವರಿಗೆ ಸೇರಿದೆ ಎಮ್ಮೆ ಇದಾಗಿದ್ದು, ಪ್ರತಿದಿನದಂತೆ ಜಿನ್ನಪ್ಪ ತಮ್ಮ 6 ಎಮ್ಮೆಗಳನ್ನು ಮೇಯಲು ದೇವರಾಜ್ ಅರಸ್ ಕಾಲನಿಗೆ ಕರೆದುಕೊಂಡು ಹೊರಟಿದ್ದರು. ಈ ವೇಳೆ ಇಂತಹ ಅವಘಡ ಸಂಭವಿಸಿದೆ. ಎಮ್ಮೆಯ ಸಾವಿನಿಂದಾಗಿ ಸುಮಾರು ಒಂದು ಲಕ್ಷ ರೂಪಾಯಿಯ ನಷ್ಟವುಂಟಾಗಿದ್ದು, ಪರಿಹಾರ ನೀಡಬೇಕೆಂದು ರೈತ ಜಿನ್ನಪ್ಪ ಹೆಸ್ಕಾಂನ್ನು ಆಗ್ರಹಿಸಿದ್ದಾರೆ.
ಸರ್ಕಾರಿ ಮರಾಠಿ ಪ್ರಾಥಮಿಕ ಶಾಲೆಯ ಗೇಟ್ ಬಳಿಯೇ ಟ್ರಾನ್ಸಫಾರ್ಮರ್ ಅಳವಡಿಸಿದ್ದು, ವಿದ್ಯಾರ್ಥಿಗಳು ಕೂಡ ಇದರಿಂದಾಗಿ ಜೀವಭಯದಲ್ಲೇ ಶಾಲೆಯನ್ನು ಪ್ರವೇಶಿಸುತ್ತಿದ್ದಾರೆ. ನಗರಸೇವಕರು ಮತ್ತು ಎಸ್.ಡಿ.ಎಂ.ಸಿ ಗಮನಕ್ಕೆ ತಂದರೂ ಕೂಡ ಕ್ಯಾರೆ ಎನ್ನುತ್ತಿಲ್ಲ. ಅಲ್ಲದೇ, ಬಸವಣ ಕುಡಚಿಯವರೇ ಹೆಸ್ಕಾಂ ಕಾರ್ಯಾಲಯದಲ್ಲಿ ಅಧಿಕಾರಿಯಾಗಿದ್ದರೂ ಕೂಡ ಅವರು ನಿರ್ಲಕ್ಷ್ಯ ವಹಿಸಿದ್ದು, ಗ್ರಾಮದಲ್ಲಿ ಮಳೆಯಿಂದಾಗಿ 7-8 ಕಂಬಗಳು ಉರುಳಿ ಬಿದ್ದರೂ ಕೂಡ ದುರಸ್ಥಿಗೆ ಬರುತ್ತಿಲ್ಲ. ಹೆಸ್ಕಾಂನ ಈ ನಿರ್ಲಕ್ಷ್ಯತನದ ವಿರುದ್ಧ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಎದುರು ಕುಡಚಿಯ ಗ್ರಾಮಸ್ಥರು ಪ್ರತಿಭಟಿಸಲಿದ್ದಾರೆ.